ಪಾಂಡವಪುರ: ಪುರಾಣ ಪ್ರಸಿದ್ಧ ಮೇಲುಕೋಟೆಯ ಚಲುವನಾರಾಯಣಸ್ವಾಮಿ ಮತ್ತು ಯೋಗಾನರಸಿಂಹಸ್ವಾಮಿ ದೇವಸ್ಥಾನಕ್ಕೆ ಶನಿವಾರ ಭೇಟಿ ನೀಡಿದ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹೆಸರಿನಲ್ಲಿ ಅರ್ಚನೆ ಮಾಡಿಸಿ ಪೂಜೆ ಸಲ್ಲಿಸಿದರು.
ಶೋಭಾ ಅವರು ಮಹಿಳಾ ಆಯೋಗದ ಅಧ್ಯಕ್ಷೆ ಸಿ. ಮಂಜುಳಾ ಹಾಗೂ ಶಾಸಕಿ ಭಾರತಿ ಶೆಟ್ಟಿ ಅವರೊಂದಿಗೆ ಬೆಳಿಗ್ಗೆ 9 ಗಂಟೆಗೆ ಆಗಮಿಸಿದರು.
ಚಲುವನಾರಾಯಣಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದಾಗ ಅರ್ಚಕರಾದ ನರಸಿಂಹ ಭಟ್ಟ, ನರಸಿಂಹ ಅಯ್ಯಂಗಾರ್ ಅವರು, ಯಾರ ಹೆಸರಿನಲ್ಲಿ ಅರ್ಚನೆ ಮಾಡಲಿ?~ ಎಂಬ ಪ್ರಶ್ನೆಗೆ ಸಚಿವೆ, ಬಿ.ಎಸ್. ಯಡಿಯೂರಪ್ಪ ಅವರ ಹೆಸರು ಹೇಳಿದರು. ಅದರಂತೆ ಅರ್ಚನೆ ಮಾಡಲಾಯಿತು. ಚಲುವನಾರಾಯಣಸ್ವಾಮಿ ಉತ್ಸವ ಮೂರ್ತಿ, ಯದುಗಿರಿದೇವಿ, ಶ್ರೀರಾಮಾನುಜಚಾರ್ಯ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ನಂತರ ಯೋಗನರಸಿಂಗಸ್ವಾಮಿ ದೇವಸ್ಥಾನಕ್ಕೆ ಮೆಟ್ಟಿಲು ಏರಿ ತೆರಳಿ ಪೂಜೆ ಸಲ್ಲಿಸಿದರು. ಅರ್ಚಕರಾದ ನಾರಾಯಣ ಭಟ್ಟ, ಶ್ರೀಧರ, ಶ್ರೀನಿವಾಸ್ ಅವರು ವಿಶೇಷ ಪೂಜೆ ನೆರವೇರಿಸಿಕೊಟ್ಟರು. ಟಿಪ್ಪು ಸುಲ್ತಾನ್ ಕೊಡುಗೆಯಾಗಿ ನೀಡಿರುವ ನಗಾರಿ ಹಾಗೂ ಗೋಪುರವನ್ನು ಶೋಭಾ ವೀಕ್ಷಿಸಿದರು.
ಮೇಲುಕೋಟೆಯ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ. ಸಮಿತಿ ಅಧ್ಯಕ್ಷ ರವಿನಾರಾಯಣ ರಾಜೀನಾಮೆ ಸಲ್ಲಿಸಿದ್ದಾರೆ. ಕೇವಲ 3 ಸಭೆಗಳು ಮಾತ್ರ ನಡೆದಿವೆ ಎಂಬ ಬಗೆಗೆ ಮಾಧ್ಯಮಗಳು ಗಮನ ಸೆಳೆದಾಗ, `ಮೇಲಕೋಟೆಯ ಪ್ರಗತಿಗೆ ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಹಣ ಬಿಡುಗಡೆ ಮಾಡಿದ್ದರು. ಆ ಬಗೆಗೆ ಗಮನ ಹರಿಸುತ್ತೇನೆ~ ಎಂದು ನುಡಿದರು.