ನವದೆಹಲಿ: ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ನಿತ್ಯ 9000 ಕ್ಯೂಸೆಕ್ ನೀರು ಬಿಡಬೇಕೆಂಬ ನಿರ್ದೇಶನ ಪುನರ್ ಪರಿಶೀಲಿಸಬೇಕೆಂಬ ಕರ್ನಾಟಕದ ಮೇಲ್ಮನವಿಯನ್ನು ಪ್ರಧಾನಿ ನೇತೃತ್ವದ `ಕಾವೇರಿ ನದಿ ಪ್ರಾಧಿಕಾರ~ (ಸಿಆರ್ಎ) ಗುರುವಾರ ತಿರಸ್ಕರಿಸಿದೆ.
`ತಮಿಳುನಾಡಿಗೆ ನಿತ್ಯ 9000 ಕ್ಯೂಸೆಕ್ ನೀರು ಬಿಡಬೇಕೆಂಬ ನಿರ್ದೇಶನ ಪುನರ್ ಪರಿಶೀಲಿಸಲು ಸಾಧ್ಯವಿಲ್ಲ. ತನಗೆ ಅಂತಹ ಅಧಿಕಾರ ಇಲ್ಲ~ ಎಂದು `ಸಿಆರ್ಎ~ ಹೇಳಿದೆ ಎಂದು ಉನ್ನತ ಮೂಲಗಳು `ಪ್ರಜಾವಾಣಿ~ಗೆತಿಳಿಸಿವೆ.
ಸೆ.19ರಂದು ನಡೆದ ಕಾವೇರಿ ನದಿ ಪ್ರಾಧಿಕಾರದ ಸಭೆ, ಸೆ. 20ರಿಂದ ಅಕ್ಟೋಬರ್ 15ರವರೆಗೆ ನಿತ್ಯ 9000 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಬೇಕೆಂದು ಕರ್ನಾಟಕಕ್ಕೆ ನಿರ್ದೇಶಿಸಿತ್ತು.
ನೀರು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿ ಮುಖ್ಯಮಂತ್ರಿ ಶೆಟ್ಟರ್ ಮತ್ತು ಜಲ ಸಂಪನ್ಮೂಲ ಸಚಿವ ಬೊಮ್ಮಾಯಿ ಸಭೆಯಿಂದ ಹೊರ ನಡೆದಿದ್ದರು. ಈ ನಿರ್ದೇಶನ ಪುನರ್ ಪರಿಶೀಲಿಸುವಂತೆ ಮನವಿ ಮಾಡಿ ಕರ್ನಾಟಕ ಮರುದಿನ (ಸೆ.20) ಮೇಲ್ಮನವಿ ಸಲ್ಲಿಸಿತ್ತು.
. ಕರ್ನಾಟಕ `ಸಿಆರ್ಎ~ ನಿರ್ದೇಶನ ಪಾಲಿಸಿದೆ. ಈ ಹಿನ್ನೆಲೆಯಲ್ಲಿ `ಸಿಆರ್ಎ~ ಸಭೆ ಸೇರುವ ಅವಶ್ಯಕತೆ ಇಲ್ಲ ಎಂದು ಗುರುವಾರ ಸೇರಿದ್ದ `ಸಿಎಂಸಿ~ ಸಭೆ ಮುಗಿದ ಬಳಿಕ ಕೇಂದ್ರ ಸರ್ಕಾರದ ಮೂಲಗಳು `ಪ್ರಜಾವಾಣಿ~ಗೆ ಸ್ಪಷ್ಟಪಡಿಸಿದ ಬೆನ್ನಲ್ಲೇ, `ಸಿಆರ್ಎ~ ಕರ್ನಾಟಕದ ಮೇಲ್ಮನವಿ ತಿರಸ್ಕರಿಸಿದ ಸುದ್ದಿ ಹೊರಬಿದ್ದಿದೆ.
ಪ್ರಧಾನಿ ಅಧ್ಯಕ್ಷರಾಗಿರುವ `ಸಿಆರ್ಎ~ಗೆ ಕರ್ನಾಟಕ, ತಮಿಳುನಾಡು, ಪುದುಚೇರಿ ಹಾಗೂ ಕೇರಳದ ಮುಖ್ಯಮಂತ್ರಿಗಳು ಸದಸ್ಯರು. ಕಾವೇರಿ ವಿವಾದದ ವಿಚಾರಣೆ ಸುಪ್ರೀಂ ಕೋರ್ಟ್ನಲ್ಲಿ ಶುಕ್ರವಾರ ನಡೆಯಲಿದೆ.