ಬೆಂಗಳೂರು: ಧಾರವಾಡದ ಹಿಂದೂಸ್ತಾನಿ ಗಾಯಕ ಜಯತೀರ್ಥ ಮೇವುಂಡಿ ಮತ್ತು ಮಂಗಳೂರಿನ ಯಕ್ಷಗಾನ ಕಲಾವಿದೆ ವಿದ್ಯಾ ಕೋಳ್ಯೂರು ಅವರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ 2011ನೇ ಸಾಲಿನ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ ಲಭಿಸಿದೆ.
ಪ್ರಶಸ್ತಿಗೆ ಆಯ್ಕೆಯಾದ ಸಾಧಕರ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಲಾಗಿದೆ. ಪ್ರಶಸ್ತಿಯು ತಲಾ ರೂ 25,000 ನಗದು ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ. `ಪ್ರಜಾವಾಣಿ' ಜತೆ ಸಂತಸ ಹಂಚಿಕೊಂಡ ಮೇವುಂಡಿ, `ದೊಡ್ಡ ಕಲಾವಿದನ ಹೆಸರಿನ ಪ್ರಶಸ್ತಿಗೆ ಭಾಜನವಾಗಿರುವುದು ನನ್ನನ್ನು ಪುಳಕಗೊಳಿಸಿದೆ' ಎಂದು ಹೇಳಿದರು.
`ದೇಶದ ಹಲವು ಪ್ರಶಸ್ತಿಗಳು ಸಿಕ್ಕರೂ ರಾಜ್ಯದಲ್ಲಿ ನನ್ನ ಪ್ರತಿಭೆಯನ್ನು ಗುರುತಿಸದಿರುವುದು ನೋವು ತಂದಿದೆ' ಎಂದು ತಿಳಿಸಿದರು.
ಪ್ರಶಸ್ತಿ ಪುರಸ್ಕೃತರು: ಸಂಗೀತ: ಜಯತೀರ್ಥ ಮೇವುಂಡಿ (ಹಿಂದೂಸ್ತಾನಿ ಸಂಗೀತ), ಸತ್ಯಜೀತ್ ಎಸ್.ಟಿ. (ಹಿಂದೂಸ್ತಾನಿ ಸಂಗೀತ, ತಬಲಾ), ಎಸ್. ಶ್ರೀನಿವಾಸ್ (ಹಿಂದೂಸ್ತಾನಿ ಸಂಗೀತ, ಕೊಳಲುವಾದನ), ರಾಹುಲ್ ಶರ್ಮ (ಸಂತೂರ್), ಅಭಿಷೇಕ್ ರಘುರಾಂ (ಕರ್ನಾಟಕ ಸಂಗೀತ), ಎಂ.ಅನಂತಕೃಷ್ಣ(ಕರ್ನಾಟಕ ಸಂಗೀತ, ಕೊಳಲುವಾದನ), ಪುಣ್ಯ ಶ್ರೀನಿವಾಸ್ (ಕರ್ನಾಟಕ ಸಂಗೀತ, ವೀಣೆ), ಎಚ್.ಎನ್. ಭಾಸ್ಕರ್ (ಕರ್ನಾಟಕ ಸಂಗೀತ, ವಯೋಲಿನ್).
ನೃತ್ಯ: ಮೀನಾಕ್ಷಿ ಶ್ರೀನಿವಾಸ್ (ಭರತನಾಟ್ಯ), ನಮ್ರತಾ ಪಮ್ನಾನಿ (ಕಥಕ್), ರಂಜನಿ ಕೆ. (ಕಥಕ್ಕಳಿ), ಜಿ.ಚಂದನ್ ದೇವಿ (ಮಣಿಪುರಿ), ಕುರವಿ ವೆಂಕಟ ಸುಬ್ರಹ್ಮಣ್ಯ ಪ್ರಸಾದ್ (ಕುಚಿಪುಡಿ), ಸೋನಾಲಿ ಮಹಾಪಾತ್ರ (ಓಡಿಸ್ಸಿ), ದಿಲೀಪ್ಚಂದ್ರ ಮೆಹತೊ (ಛಾವು), ಸುಧಾ ರಘುರಾಮನ್ (ಸಂಗೀತ ನೃತ್ಯ).
ರಂಗಭೂಮಿ: ರಾಮ್ಜಿ ಬಾಲಿ, ಎಸ್.ಮುರುಗಭೂಪತಿ (ನಾಟಕ ರಚನೆ), ಪ್ರವೀಣಕುಮಾರ್, ರಷ್ಮಿ ಬಿ., ಶಂಕರ್ ವೆಂಕಟೇಶ್ವರನ್, ಪವಿತ್ರಾ ರಭಾ (ನಿರ್ದೇಶನ), ರಯಂತಿ ರಭಾ (ನಟನೆ), ಗೌತಮ್ ಹಲ್ದಾರ್ (ರಂಗಕಲೆ).
ಸಾಂಪ್ರದಾಯಿಕ ಕಲೆ: ವಿದ್ಯಾ ಕೋಳ್ಯೂರು (ಯಕ್ಷಗಾನ).