ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಲಾರ ಜಾತ್ರೆ ನಂತರದ ಗೋಳು ಕೇಳುವವರಾರು

Last Updated 19 ಫೆಬ್ರುವರಿ 2012, 7:30 IST
ಅಕ್ಷರ ಗಾತ್ರ

ಹೂವಿನಹಡಗಲಿ: ಉತ್ತರ ಕರ್ನಾಟಕದಲ್ಲಿಯೇ ದೊಡ್ಡ ಜಾತ್ರೆಯಾಗಿರುವ ಮೈಲಾರ ಲಿಂಗೇಶ್ವರನ ಜಾತ್ರೆ ತನ್ನದೆಯಾದ ವಿಶೇಷತೆಯನ್ನು ಹೊಂದಿದೆ.

ರಾಜ್ಯ, ಹೊರ ರಾಜ್ಯಗಳಿಂದ ಜಾತ್ರೆಗೆ ಜನರು ಧಾವಿಸುತ್ತಾರೆ. ಹತ್ತಾರು ದಿನಗಳ ಕಾಲ ಜಾತ್ರೆ ಸಂಭ್ರಮದಿಂದ ಜರುಗುತ್ತದೆಸಿಲ್ಲಿ ಗೊರುವಪ್ಪ ನುಡಿಯುವ ಕಾರ್ಣಿಕದಿಂದಲೇ ಬರುವ ದಿನಗಳ ಭವಿಷ್ಯವನ್ನು ಲೆಕ್ಕಾಚಾರ ಮಾಡಲಾಗುತ್ತದೆ.

ಆದರೆ ಜಾತ್ರೆ ಮುಗುದ ಮೇಲೆ ನದಿ ತೀರದ ಸುತ್ತ ಬದುಕುವ ಜನರ ಬವಣೆಯನ್ನು ಹೇಳತೀರದು.
ಲಕ್ಷಾಂತರ ಜನರು ಬಂದು ಹೋಗುವ ಜಾತ್ರೆಯಲ್ಲಿ ತಾವು ತಂದಿರುವ ಅನ್ನ, ರೊಟ್ಟಿ, ತಿಂಡಿ-ತಿನಿಸುಗಳನ್ನು ಜನರು ಉಂಡು ಉಳಿದಿದ್ದನ್ನು ತಾವು ಹೂಡಿರುವ ಜಾಗದ ಆಸು-ಪಾಸಿನಲ್ಲಿ ಬಿಸಾಡಿ ಹೋಗುತ್ತಾರೆ ನಾಲ್ಕಾರು ದಿನಗಳಲ್ಲಿ ಅದು ಹಳಸಿ ಇಡೀ ವಾತಾವರಣವನ್ನೇ ಗಬ್ಬೆಬ್ಬಿಸಿರುತ್ತದೆ.
 

ನದಿ ತೀರದಲ್ಲಿ ಟೆಂಟ್‌ಗಳನ್ನು ಹಾಕಿಕೊಂಡು ಜಾತ್ರೆಯನ್ನು ಮಾಡುವ ಜನತೆ ನದಿ ತೀರದಲ್ಲಿ ಮಾಡಿರುವ ಮಲ-ಮೂತ್ರ ವಿಸರ್ಜನೆ ನದಿತೀರಕ್ಕೆ ಹೋಗಲು ಸಾಧ್ಯವಿರದಷ್ಟು ಸಮಸ್ಯೆಯನ್ನುಂಟು ಮಾಡುತ್ತದೆ.
ಬಟ್ಟೆ ತುಂಡುಗಳು, ಪ್ಲಾಸ್ಟಿಕ್, ಜವಳ ತೆಗೆಸಿದ ಕೂದಲು, ಹಣ್ಣಿನ ಸಿಪ್ಪೆ, ತೆಂಗಿನ ಕಾಯಿಗಳ ಚಿಪ್ಪು, ತರಕಾರಿ ಸೇರಿದಂತೆ ತ್ಯಾಜ್ಯ ವಸ್ತುಗಳು ಸಂಗ್ರಹವಾಗಿ ಕೊಳಚೆ ಪ್ರದೇಶದ ವಾತಾವರಣ ಸೃಷ್ಟಿಸಿದೆ.
 

ಇದರಿಂದಾಗ ಸೊಳ್ಳೆಗಳು ಹೆಚ್ಚಾಗಿ ಭಯವನ್ನು ತರುವ ರೀತಿಯಲ್ಲಿ ಮುಕ್ಕುತ್ತವೆ. ಜನ-ಜಾನುವಾರುಗಳಿಗೆ ಪರದೆ ಕಟ್ಟದಿದ್ದರೆ ಸೊಳ್ಳೆಗಳಿಗೆ ಆಹುತಿಯಾಗುವ ಭಯ ಜನರಲ್ಲಿ ಮನೆಮಾಡಿದೆ.


ನದಿ ತೀರದಲ್ಲಿ ಹೊಲಸಿನಿಂದಾಗಿ ನೀರು ಮಲೀನಗೊಂಡು ಇದೇ ನೀರನ್ನು ಬಳಸುವುದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಾಗಿದ್ದು, ನೀರು ಕುಡಿಯಲು ಜನ ಹಿಂದೆ-ಮುಂದೆ ನೋಡುವಂತೆ ಮಾಡಿದೆ.

ಸಂಜೆ 6ರ ಸಮಯಕ್ಕೆ ಪ್ರತಿಯೊಂದು ಮನೆಯವರು ಮನೆಯ ಕಿಟಕಿ-ಬಾಗಿಲುಗಳನ್ನು ಹಾಕಿಕೊಂಡರೆ ರಾತ್ರಿ ನಿದ್ದೆ ಮಾಡಲು ಪ್ರಯತ್ನಿಸಬಹುದು ಇಲ್ಲವಾದಲ್ಲಿ ಜಾಗರಣೆ ಗ್ಯಾರಂಟಿ.

ಪ್ರತಿ ಮನೆಯ ಮುಂದಿನ ಬಾಗಿಲಿಗೆ ಪರದೆಯನ್ನು ಬಿಟ್ಟು ಬೆಳಿಗ್ಗೆ ತೆಗೆದಾಗ ಸೊಳ್ಳಿಗಳ ರಾಶಿಯನ್ನು ನೋಡಬಹುದು. ಜನರು ಪರದೆ ಕಟ್ಟದಿದ್ದರೆ ನಿದ್ದೆ ಮಾಡಲು ಸಾಧ್ಯವಿಲ್ಲ ಹಾಗೆ ದನಕರುಗಳಿಗೂ ಪರದೆಯನ್ನು ಕಟ್ಟುವ ಪರಿಸ್ಥಿತಿ ಅಲ್ಲಿದೆ.

ಜಾತ್ರೆಗೆ ಸಿದ್ಧತೆ ಮಾಡಿದರೆ ಸಾಲದು ಜಾತ್ರೆಯ ನಂತರ ಆಗುವ ಅನಾಹುತವನ್ನು ತಪ್ಪಿಸಲು ಗ್ರಾಮಾಡಳಿತ, ತಾಲ್ಲೂಕು ಆಡಳಿತ ಮತ್ತು ಜಿಲ್ಲಾಡಳಿತಗಳು ಗಂಭೀರ ಯೋಚನೆ ಮಾಡವುದರ ಜೊತೆಗೆ ಪರಿಹಾರವನ್ನು ಕಂಡುಕೊಳ್ಳಬೇಕಿದೆ.

ಜಾತ್ರೆಯ ಸಂಭ್ರಮಕ್ಕಾಗಿ ಜನರು ತಿಂಗಳಿಂದ ಸಿದ್ಧತೆ ಮಾಡಿಕೊಂಡರೆ ಮುಗಿದ ಕೂಡಲೇ ಚಿಂತೆಗೀಡಾಗುವ ಪರಿಸ್ಥಿತಿ ನಮ್ಮದು ಎಂದು ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ.

ಏಳು ಕೋಟಿ ಮೈಲಾರ ಲಿಂಗನ ಜಾತ್ರೆಯ ವ್ಯಥೆ-ಕಥೆ ಇದಾಗಿದೆ. ಬರುವ ಜಾತ್ರೆಯಿಂದಾದರೂ ಇಂತಹ ಸಮಸ್ಯೆಗಳನ್ನು ಅರಿತು ಅಧಿಕಾರಿಗಳು ಜನಪ್ರತಿನಿಧಿಗಳು ಪೂರ್ವ ಸಿದ್ಧತೆಯನ್ನು ಮಾಡಿಕೊಂಡರೆ ಮೈಲಾರದ ಜನತೆ ನಿಟ್ಟುಸಿರು ಬಿಡಬಹುದಲ್ಲವೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT