ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಎರಡು ಬೋಗಿಗಳಿಗೆ ಬೆಂಕಿ

Last Updated 21 ಜನವರಿ 2011, 19:30 IST
ಅಕ್ಷರ ಗಾತ್ರ

ಮೈಸೂರು: ಅಶೋಕಪುರಂ ರೈಲು ನಿಲ್ದಾಣದ ಆವರಣದಲ್ಲಿ ಉಪಯೋಗಕ್ಕೆ ಬಾರದೆ ನಿಂತಿದ್ದ ಎರಡು ರೈಲ್ವೆ ಬೋಗಿಗಳಿಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಸುಟ್ಟು ಕರಕಲಾದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.

 ಘಟನೆಯಿಂದ ಸ್ಥಳದಲ್ಲಿ ಕೆಲ ಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅಶೋಕಪುರಂ ರೈಲು ನಿಲ್ದಾಣದಲ್ಲಿ ನಿಲ್ಲಿಸಿದ್ದ ರೈಲ್ವೆ ಬೋಗಿಗೆ ಮಧ್ಯಾಹ್ನ 12.15 ಗಂಟೆ ಸುಮಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಇದರಿಂದ ಪಕ್ಕದ ಇನ್ನೊಂದು ಬೋಗಿಗೂ ಬೆಂಕಿ ಆವರಿಕೊಂಡಿತು. ಕೂಡಲೇ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಮೂರು ಅಗ್ನಿಶಾಮಕ ವಾಹನಗಳು ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದವು.

ಮೂರು ಅಗ್ನಿಶಾಮಕ ವಾಹನಗಳ ಸಿಬ್ಬಂದಿ ಸತತ ಒಂದು ಗಂಟೆ ಬೆಂಕಿ ನಂದಿಸಿದರು. ಬೆಂಕಿಯ ಕೆನ್ನಾಲಗೆ ಬೋಗಿಯ ಸುತ್ತ ಮುತ್ತ ಹರಡಿದ್ದರಿಂದ, ಇಡೀ ಆವರಣದಲ್ಲಿ ದಟ್ಟವಾದ ಹೊಗೆ ಆವರಿಸಿಕೊಂಡಿತ್ತು. ಬೆಂಕಿ ಹೊತ್ತಿ ಉರಿಯುತ್ತಿದ್ದ ದೃಶ್ಯ ನೋಡಲು ನೂರಾರು ಜನ ಸ್ಥಳದಲ್ಲಿ ಜಮಾಯಿಸಿದ್ದರು.

 ಈ ಘಟನೆಯಿಂದಾಗಿ ಮಧ್ಯಾಹ್ನ 12.30 ಗಂಟೆಗೆ ಚಲಿಸಬೇಕಾದ ಮೈಸೂರು-ಚಾಮರಾಜನಗರ- ಮೈಸೂರು ಪ್ಯಾಸೆಂಜರ್ ರೈಲು ಮತ್ತು ಮೈಸೂರು-ತಿರುಪತಿ-ಚೆನ್ನೈ ರೈಲುಗಳು ಅರ್ಧ ಗಂಟೆ ವಿಳಂಬವಾಗಿ ಸಂಚರಿಸಿದವು. ಇದರಿಂದಾಗಿ ಕೆಲಹೊತ್ತು ಪ್ರಯಾಣಿಕರು ಪರದಾಡುವಂತಾಯಿತು.

ಅಶೋಕಪುರಂ ರೈಲು ನಿಲ್ದಾಣದ ಆವರಣದಲ್ಲಿ ಉಪಯೋಗಕ್ಕೆ ಬಾರದ ಒಟ್ಟು 8 ಬೋಗಿಗಳನ್ನು ನಿಲ್ಲಿಸಲಾಗಿದೆ. ಈ ಪೈಕಿ ಕಳೆದ ಡಿ. 22ರಂದು ಮೂರು ಬೋಗಿಗಳು ಬೆಂಕಿಗೆ ಆಹುತಿಯಾಗಿದ್ದವು. ಆಗಲೂ ಸಮಯಕ್ಕೆ ಸರಿಯಾಗಿ ಆಗಮಿಸಿದ್ದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದರು.

ಒಣ ಹುಲ್ಲು ಕಾರಣ: ರೈಲು ಹಳಿಗಳ ಎಡ ಮತ್ತು ಬಲ ಬದಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹುಲ್ಲು ಹಾಗೂ ಗಿಡಗಂಟಿಗಳು ಬೆಳೆದಿವೆ. ಯಾರೋ ಕಿಡಿಗೇಡಿಗಳು ಎಸೆದ ಬೆಂಕಿಯಿಂದ ಗಿಡ ಗಂಟಿಗಳು ಸುಟ್ಟು, ಬಳಿಕ ಬೋಗಿಗೆ ಬೆಂಕಿ ಬಿದ್ದಿರಬಹುದೆಂದು ಅಗ್ನಿಶಾಮಕ ದಳದ ಪ್ರಾದೇಶಿಕ ಅಧಿಕಾರಿ ಸಿ.ಗುರುಲಿಂಗಯ್ಯ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT