ಮೈಸೂರು: 2011-12ನೇ ಸಾಲಿನ ಮುಂಗಡ ಪತ್ರದಲ್ಲಿ ದಸರಾ ಅಭಿವೃದ್ಧಿ ಪ್ರಾಧಿಕಾರ, ಪ್ರವಾಸೋದ್ಯಮ ಪ್ರಾಧಿಕಾರ ರಚನೆ ಹಾಗೂ ಪಾಲಿಕೆಗೆ ವಿಶೇಷ ಅನುದಾನ ಬಿಡುಗಡೆ ಮಾಡದಿರುವುದರಿಂದ ಜಿಲ್ಲೆಯ ಜನರಲ್ಲಿ ನಿರಾಸೆ ಮೂಡಿಸಿದೆ. ಅಲ್ಲದೆ, ಯಾವುದೇ ವಿಶೇಷ ಯೋಜನೆಯನ್ನೂ ಜಿಲ್ಲೆಗೆ ಈ ಬಾರಿ ಪ್ರಕಟಿಸಿಲ್ಲ.
ಕೃಷಿಗೆ ಪ್ರತ್ಯೇಕ ಬಜೆಟ್ ಮಂಡಿಸಿರುವುದನ್ನು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಸ್ವಾಗತಿಸಿದ್ದಾರೆ. ಆದರೆ ಬಜೆಟ್ನಿಂದ ಕಬ್ಬು ಬೆಳೆಗಾರರಿಗೆ ನಿರಾಸೆಯಾಗಿದೆ ಎಂದು ಅವರು ತಿಳಿಸಿದ್ದಾರೆ.ರಾಜ್ಯ ಬಜೆಟ್ನಲ್ಲಿ ಮೈಸೂರಿನ ಹೆಸರನ್ನು ಹುಡುಕಬೇಕಾದ ಪರಿಸ್ಥಿತಿ ಬಂದಿರುವುದು ವಿಪರ್ಯಾಸ ಎಂದು ಸಣ್ಣ ಕೈಗಾರಿಕೆಗಳ ಸಂಘದ ಕಾರ್ಯದರ್ಶಿ ಸುರೇಶ ಕುಮಾರ್ ಜೈನ್ ಹೇಳಿದ್ದಾರೆ.
ಚಾಮರಾಜನಗರ ವರದಿ: ಸುಸಜ್ಜಿತ ಅರಿಶಿಣ ಮಾರುಕಟ್ಟೆ ಸ್ಥಾಪನೆ ಆಗಬೇಕು ಎಂಬ ಬಹು ದಿನದ ಕನಸು ಈ ಬಾರಿಯೂ ಈಡೇರಿಲ್ಲ. ಕಬಿನಿಯಿಂದ ಜಿಲ್ಲೆಯ 18 ಕೆರೆಗಳಿಗೆ ನೀರು ತುಂಬಿಸಲು ರೂ 100 ಕೋಟಿ ಅನುದಾನ ಘೋಷಿಸಿರುವುದು ಜನರಲ್ಲಿ ಕೊಂಚ ನೆಮ್ಮದಿ ಮೂಡಿಸಿದೆ.
ಮಡಿಕೇರಿ ವರದಿ: ಜಿಲ್ಲೆಯ ಪ್ರಮುಖ ಸಮಸ್ಯೆಯಾದ ಆನೆ ಹಾವಳಿ ತಡೆಗಟ್ಟಲು ರೂ.320 ಕೋಟಿ ಅನುದಾನದ ಬಗ್ಗೆ ಬಜೆಟ್ನಲ್ಲಿ ಉಲ್ಲೇಖವಿಲ್ಲ. ರಸ್ತೆ ಅಭಿವೃದ್ಧಿಗೆ ರೂ.50 ಕೋಟಿ ಅನುದಾನ ಪ್ರಕಟಿಸಿರುವುದು ಜನರಲ್ಲಿ ಸಂತಸ ಮೂಡಿಸಿದೆ.
ಮಂಡ್ಯ ವರದಿ: ಮೈಷುಗರ್ ಮತ್ತು ಬಿಎಸ್ಎಸ್ಕೆ ಕಬ್ಬು ಕಾರ್ಖಾನೆಗಳಿಗೆ 60 ರಿಂದ 70 ಕೋಟಿ ಅನುದಾನ ಪ್ರಕಟಿಸುವ ನಿರೀಕ್ಷೆ ಹುಸಿಯಾಗಿದೆ. ಮೈಷುಗರ್ ಅಭಿವೃದ್ಧಿಗೆ ಕೇವಲ ರೂ.15 ಕೋಟಿ ಘೋಷಿಸಲಾಗಿದೆ. ರೈತರಲ್ಲಿ ಈ ಬಜೆಟ್ ಭಾರೀ ನಿರಾಸೆ ಮೂಡಿಸಿದೆ.
ಹಾಸನ ವರದಿ: ಮೂರನೇ ವರ್ಷವೂ ರಾಜ್ಯ ಬಜೆಟ್ ಹಾಸನಕ್ಕೆ ನಿರಾಸೆ ಉಂಟುಮಾಡಿದೆ. ಜಿಲ್ಲೆಯ ಹಲವು ವರ್ಷಗಳ ಬೇಡಿಕೆಗಳಲ್ಲಿ ಒಂದು ಬೇಡಿಕೆಯೂ ಬಜೆಟ್ನಲ್ಲಿ ಉಲ್ಲೇಖವಾಗಿಲ್ಲ.