ಬೆಂಗಳೂರು: ನಗರದ ಮೈಸೂರು ರಸ್ತೆಯಲ್ಲಿರುವ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರದಿಂದ ಭಾನುವಾರದವರೆಗೆ (ಏ. 21) ಜಾತ್ರಾ ಮಹೋತ್ಸವ ನಡೆಯಲಿದ್ದು, ಶನಿವಾರ ಮತ್ತು ಭಾನುವಾರ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಬ್ಯಾಟರಾಯನಪುರ ಸಂಚಾರ ಠಾಣೆಯ ಪೊಲೀಸರು ತಿಳಿಸಿದ್ದಾರೆ.
`ಜಾತ್ರಾ ಮಹೋತ್ಸವದ ಪ್ರಯುಕ್ತ ಹೆಚ್ಚಿನ ಭಕ್ತರು ದೇವಸ್ಥಾನಕ್ಕೆ ಬರುವುದರಿಂದ ವಾಹನ ದಟ್ಟಣೆ ಉಂಟಾಗಬಹುದು. ಈ ನಿಟ್ಟಿನಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದೆ. ಸಾರ್ವಜನಿಕರು ಈ ನಿಯಮಗಳನ್ನು ಪಾಲಿಸಿ ಸುಲಭ ಸಂಚಾರಕ್ಕೆ ಅನುವು ಮಾಡಿಕೊಡಬೇಕು' ಎಂದು ಪೊಲೀಸರು ಮನವಿ ಮಾಡಿದ್ದಾರೆ. ಸಿರ್ಸಿ ವೃತ್ತದ ಕಡೆಯಿಂದ ಬರುವ ವಾಹನಗಳು ಹೊಸ ಗುಡ್ಡದಹಳ್ಳಿ ಜಂಕ್ಷನ್ನಲ್ಲಿ ಎಡ ತಿರುವು ಪಡೆದು, ಟಿಂಬರ್ ಯಾರ್ಡ್ ಬಡಾವಣೆಯ ಮೂಲಕ ಮುನೇಶ್ವರ ಬ್ಲಾಕ್-50 ಅಡಿ ರಸ್ತೆ ಪ್ರವೇಶಿಸಿ, ಹೊಸಕೆರೆಹಳ್ಳಿ ರಸ್ತೆ ಮಾರ್ಗವಾಗಿ ಮೈಸೂರು ರಸ್ತೆ ಕಡೆ ಸಂಚರಿಸಬಹುದು.
ಅದೇ ರೀತಿ ಮೈಸೂರು ಕಡೆಯಿಂದ ಬರುವ ವಾಹನಗಳು, ಕಿಮ್ಕ ಜಂಕ್ಷನ್ನಲ್ಲಿ ಎಡ ತಿರುವು ಪಡೆಯಬೇಕು. ಬಳಿಕ ದೀಪಾಂಜಲಿನಗರ ಸಮೀಪದ ಶನೇಶ್ವರ ದೇವಸ್ಥಾನದ ಬಳಿ ಬಲ ತಿರುವು ತೆಗೆದುಕೊಂಡು ಹೊಸದಾಗಿ ನಿರ್ಮಾಣಗೊಂಡಿರುವ ಮೇಲ್ಸೇತುವೆ ಮೂಲಕ ಮೈಸೂರು ರಸ್ತೆ ಸೇರಿ ನಗರದ ಕಡೆ ಸಂಚರಿಸಬಹುದು.
ಏ.20ರಂದು ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 12 ಗಂಟೆವರೆಗೆ ಹಾಗೂ ಏ.21ರಂದು ರಾತ್ರಿ 1 ಗಂಟೆಯಿಂದ ಬೆಳಿಗ್ಗೆ 10 ಗಂಟೆವರೆಗೆ ಈ ಬದಲಾವಣೆ ಇರುತ್ತದೆ ಎಂದು ಪೊಲೀಸರು ಹೇಳಿದ್ದಾರೆ.