ನವದೆಹಲಿ: `ನಾವು ಟೂರ್ನಿಯಲ್ಲಿ ಆಡಲಿರುವ ಮೊದಲ ಎರಡು ಪಂದ್ಯಗಳೇ ಅಭ್ಯಾಸ ಪಂದ್ಯಗಳು. ಈ ಪಂದ್ಯದಲ್ಲಿ ಸಿಂಗಪುರ ಮತ್ತು ಇಟಲಿಯನ್ನು ನಾವು ಎದುರಿಸುತ್ತಿದ್ದೇವೆ~
-ಫೆಬ್ರುವರಿ 18ರಿಂದ ಮೇಜರ್ ಧ್ಯಾನಚಂದ್ ಹಾಕಿ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಒಲಿಂಪಿಕ್ ಹಾಕಿ ಅರ್ಹತಾ ಟೂರ್ನಿಯಲ್ಲಿ ಪಾಲ್ಗೊಳ್ಳುವ ಆತಿಥೇಯ ಭಾರತ ಪುರುಷರ ತಂಡದ ನಾಯಕ ಭರತ ಕುಮಾರ್ ಚೆಟ್ರಿಯ ವಿಶ್ವಾಸದ ನುಡಿಗಳಿವು.
ಗುರುವಾರ ಮಧ್ಯಾಹ್ನ ವಾರ್ಮ್ ಅಪ್ಮುಗಿಸಿ ತಂಡದ ಮುಖ್ಯ ಕೋಚ್ ಮೈಕೆಲ್ ನಾಬ್ಸ್ ಮತ್ತು ಸಹ ಆಟಗಾರ ಸಂದೀಪ್ ಸಿಂಗ್ ಜೊತೆಗೆ ಪತ್ರಿಕಾಗೋಷ್ಠಿಗೆ ಬಂದಿದ್ದರು ಭರತ್.
ಟೂರ್ನಿಗೂ ಮುನ್ನ ಭಾರತ ಇತರ ತಂಡಗಳೊಂದಿಗೆ ಒಂದೇ ಒಂದು ಅಭ್ಯಾಸ ಪಂದ್ಯವನ್ನೂ ಆಡದಿರುವ ಕುರಿತ ಪ್ರಶ್ನೆಗೆ ಗೋಲ್ಕೀಪರ್ ಭರತ್ ಉತ್ತರಕ್ಕೆ ಮಾಧ್ಯಮಗೋಷ್ಠಿಯಲ್ಲಿ ನಗೆಯ ಅಲೆ ಉಕ್ಕಿತ್ತು.
`ಟೂರ್ನಿಯಲ್ಲಿ ಭಾಗವಹಿಸುತ್ತಿರುವ ಉಳಿದೆಲ್ಲ ತಂಡಗಳ ಆಟಗಾರರಿಗಿಂತಲೂ ನಮ್ಮ ಆಟಗಾರರು ಫಿಟ್ ಆಗಿದ್ದಾರೆ. ಅದರಲ್ಲೂ ಸಿಂಗಪುರ ಮತ್ತು ಇಟಲಿ ತಂಡಗಳು ದುರ್ಬಲವಾಗಿವೆ~ ಎಂದು ಹೇಳಿದರು.
ಗಾಯದ ಸಮಸ್ಯೆಯಿಲ್ಲ: `ತಂಡದಲ್ಲಿ ಗಾಯದ ಸಮಸ್ಯೆಯಿಲ್ಲ. ಜಿಮ್ನಾಷಿಯಂ ಮತ್ತು ಅಭ್ಯಾಸದಲ್ಲಿ ಉತ್ತಮವಾಗಿ ಆಡುತ್ತಿದ್ದಾರೆ. ಆಟಗಾರರಲ್ಲಿ ಆತ್ಮವಿಶ್ವಾಸವೂ ಹೆಚ್ಚಿದೆ~ ಎಂದರು. `ದಿಲೀಪ್ ಟಿರ್ಕಿ ಅವರ ಮಾರ್ಗದರ್ಶನದಿಂದ ತಂಡಕ್ಕೆ ಬಹಳಷ್ಟು ಉಪಯೋಗವಾಗಿದೆ. ವಿಶೇಷವಾಗಿ ಆಟಗಾರರ ಪಾದಚಲನೆಯಲ್ಲಿ ಸುಧಾರಣೆಯಾಗಿದ್ದು ಚುರುಕುತನವೂ ಕಂಡುಬರುತ್ತಿದೆ~ ಎಂದು ಅಭಿಪ್ರಾಯಪಟ್ಟರು.
`ದಿಲೀಪ್ 15-20 ದಿವಸ ನಮಗೆ ನೀಡಿದ ಮಾರ್ಗದರ್ಶನ ಬಹಳಷ್ಟು ಉಪಯುಕ್ತವಾಗಿದೆ. ಪೆನಾಲ್ಟಿ ಕಾರ್ನರ್, ಡ್ರ್ಯಾಗ್ ಫ್ಲಿಕ್ಗಳಲ್ಲಿ ಪರಿಣತಿ ಸಾಧಿಸಲು ಸಹಕಾರಿಯಾಗಿದೆ. ತಂಡದ ಎಲ್ಲ ಆಟಗಾರರಿಗೂ ತಮ್ಮ ಜವಾಬ್ದಾರಿಯ ಅರಿವು ಇದೆ. ಎಲ್ಲ ಕ್ಷೇತ್ರಗಳಲ್ಲಿಯೂ ಉತ್ತಮ ಆಟ ಪ್ರದರ್ಶಿಸುವ ಸಿದ್ಧತೆಯನ್ನೂ ನಾವು ಮಾಡಿಕೊಂಡಿದ್ದೇವೆ~ ಎಂದು ಸಂದೀಪ್ ಸಿಂಗ್ ಹೇಳಿದರು.