ಹೊಸಕೋಟೆ: ಪಟ್ಟಣದ ಬಸ್ ನಿಲ್ದಾಣದಲ್ಲಿನ ಕೃಪಾ ಮೊಬೈಲ್ ಮಾರಾಟ ಅಂಗಡಿಯ ಹಿಂಭಾಗದ ಗೋಡೆ ಕೊರೆದು ಒಳನುಗ್ಗಿರುವ ಕಳ್ಳರು ಅಂಗಡಿಯಲ್ಲಿದ್ದ ಮೊಬೈಲ್ಗಳು, ಅದಕ್ಕೆ ಸಂಬಂಧಿಸಿದ ಹಲವಾರು ಉಪಕರಣಗಳನ್ನು ದೋಚಿ ಪರಾರಿಯಾದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಕಳವಾಗಿರುವ ವಸ್ತುಗಳ ಮೌಲ್ಯ ಸುಮಾರು 2 ಲಕ್ಷ ರೂಪಾಯಿಗಳಿರಬಹುದು ಎಂದು ಅಂಗಡಿಯ ಮಾಲೀಕ ಎನ್.ಆರ್.ಶಿವಪ್ರಕಾಶ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಆರೋಪ: ತಾಲ್ಲೂಕಿನ ಈಸ್ತೂರು ಗ್ರಾಮದ ಸರ್ಕಾರಿ ಕುಂಟೆ ಜಮೀನಿನಲ್ಲಿ ಪ್ರಭಾವಿ ವ್ಯಕ್ತಿಯೊಬ್ಬರು ಅಕ್ರಮವಾಗಿ ಮನೆ ನಿರ್ಮಿಸುತ್ತಿದ್ದು, ಈ ಬಗ್ಗೆ ಸಂಬಂಧಿಸಿದ ಕಂದಾಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದಲಿತ ಮುಖಂಡ ನಾರಾಯಣಪ್ಪ ಆರೋಪಿಸಿದ್ದಾರೆ.
ಅನುಮೋದನೆ: ಇಲ್ಲಿನ ತಾಲ್ಲೂಕು ಕಚೇರಿ ಆವರಣದಲ್ಲಿ ಪುರಸಭೆಯು ಶೇ 22.75ರ ಅನುದಾನದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿ ಸ್ಥಾಪಿಸುವುದಕ್ಕೆ ಜಿಲ್ಲಾಧಿಕಾರಿಗಳು ಅನುಮೋದನೆ ನೀಡಿದ್ದಾರೆ. ಸದ್ಯದಲ್ಲೇ ಪುತ್ಥಳಿ ಸ್ಥಾಪನೆಗೆ ಸಚಿವ ಬಿ.ಎನ್.ಬಚ್ಚೇಗೌಡ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ದಲಿತ ಮುಖಂಡ ವಿ.ವಿಜಯಕುಮಾರ್ ತಿಳಿಸಿದ್ದಾರೆ.
ಅಪಘಾತ: ಮೊಪೆಡ್ ಸವಾರನ ಸಾವು
ಇಲ್ಲಿನ ಹೆದ್ದಾರಿಯ ಗೌತಮ ಕಾಲೋನಿ ಬಳಿ ಲಾರಿಯೊಂದು ಮೊಪೆಡ್ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಸೈಯದ್ ಷಫೀವುಲ್ಲಾ (45) ಎಂಬುವರೇ ಸಾವಿಗೀಡಾದವರು. ಪಟ್ಟಣದಲ್ಲಿ ಹೋಟೆಲ್ ನಡೆಸುತ್ತಿದ್ದ ಅವರು, ಸರಕು ತರುವುದಕ್ಕಾಗಿ ಮೊಪೆಡ್ನಲ್ಲಿ ತೆರಳುತ್ತಿದ್ದಾಗ ಬೆಂಗಳೂರು ಕಡೆಯಿಂದ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆಯಿತು. ಕೆಳಕ್ಕೆ ಬಿದ್ದ ಷಫೀವುಲ್ಲಾ ಮೇಲೆ ಲಾರಿ ಚಕ್ರ ಹರಿದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಆನಂತರ ಲಾರಿ ಎದುರುಗಡೆಯಿಂದ ಬಂದ ಎರಡು ಕಾರುಗಳಿಗೂ ಡಿಕ್ಕಿ ಹೊಡೆಯಿತು. ಅದೃಷ್ಟವಶಾತ್ ಅದರಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.