ದಾವಣಗೆರೆ: ಚಿತ್ರದುರ್ಗದ ಮುರುಘರಾಜೇಂದ್ರ ಬೃಹನ್ಮಠ ಮತ್ತು ದಾವಣಗೆರೆ ಬಸವ ಕೇಂದ್ರದಿಂದ ಲಿಂ. ಜಯದೇವ ಮುರುಘ ರಾಜೇಂದ್ರ ಸ್ವಾಮೀಜಿ ಅವರ ಸ್ಮರಣೋತ್ಸವದ ಅಂಗವಾಗಿ ಕೊಡುವ `ಜಯದೇವ ಶ್ರೀ~ ಪ್ರಶಸ್ತಿಗೆ ಕೇಂದ್ರ ಕಂಪೆನಿ ವ್ಯವಹಾರಗಳ ಸಚಿವ ಎಂ. ವೀರಪ್ಪ ಮೊಯಿಲಿ, `ಶೂನ್ಯಪೀಠ~ ಪ್ರಶಸ್ತಿಗೆ ಮೈಸೂರಿನ ವಿಚಾರವಾದಿ ಪ್ರೊ.ಕೆ.ಎಸ್. ಭಗವಾನ್, ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್, ವಿಜಾಪುರದ ರಾಜ್ಯ ಮಾನವ ಹಕ್ಕುಗಳ ಮಂಡಳಿ ಅಧ್ಯಕ್ಷ ಹಾಶಿಂಪೀರ್ ವಾಲಿಕಾರ ಅವರನ್ನು ಆಯ್ಕೆ ಮಾಡಲಾಗಿದೆ.
ನಗರದಲ್ಲಿ ಜ. 29ರಿಂದ ಮೂರುದಿನ ಕಾಲ ಶ್ರೀಗಳ 55ನೇ ಸ್ಮರಣೋತ್ಸವ ನಡೆಯಲಿದೆ. 30ರಂದು ನಡೆಯುವ ಕಾರ್ಯಕ್ರಮದಲ್ಲಿ ಮುರುಘರಾಜೇಂದ್ರ ಬೃಹನ್ಮಠದ ಅಧ್ಯಕ್ಷ ಶಿವಮೂರ್ತಿ ಮುರುಘಾ ಶರಣರು ಪ್ರಶಸ್ತಿ ಪ್ರದಾನ ಮಾಡುವರು ಎಂದು ಬಸವ ಕೇಂದ್ರದ ಚರಮೂರ್ತಿ ಬಸವಪ್ರಭು ಸ್ವಾಮೀಜಿ ಗುರುವಾರ ತಿಳಿಸಿದರು.
ಈ ಪ್ರಶಸ್ತಿಗಳು ತಲಾ ರೂ 25 ಸಾವಿರ ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ.