ಗದಗ: ನಾಗರ ಪಂಚಮಿ ಮರುದಿನ ನಡೆಯುವ ಪರಸ್ಪರ ಸಗಣಿ ಎರಚಾಟ ಬುಧವಾರ ನಗರದಲ್ಲಿ ಮಳೆಯ ನಡುವೆಯೇ ನಡೆಯಿತು.
ಸ್ಥಳೀಯ ಗಂಗಾಪುರ ಪೇಟೆ ಕುಂಬಾರ ಗಲ್ಲಿಯಲ್ಲಿ ಓಣಿಯ ಯುವಕರು ಬೆಳಿಗ್ಗೆ ಬಸವ ಮತ್ತು ದುರ್ಗಾ ದೇವಿಗೆ ಪೂಜೆ ಸಲ್ಲಿಸಿ, ಸಂಪ್ರದಾಯದಂತೆ ಚಿಕ್ಕ ಮಕ್ಕಳಿಂದ ಗರಡಿ ಮನೆಯಲ್ಲಿ ಕುಸ್ತಿ ಆಡಿಸಿದರು.
ನಂತರ ಯುವಕರು ಯುವತಿಯರ ಬಟ್ಟೆ ಮತ್ತು ತರಕಾರಿ ಮಾಲೆಯನ್ನು ಕೊರಳಿಗೆ ಧರಿಸಿ, ಸೆಗಣಿ ಆಟಕ್ಕೆ ಸಜ್ಜುಗೊಂಡರು. ಒಂದು ತಿಂಗಳಿನಿಂದ ಓಣಿಯಲ್ಲಿ ಸಂಗ್ರಹ ಮಾಡಿದ್ದ ಸಗಣಿ ಗುಡ್ಡೆಯನ್ನು ದಾರಿಯುದ್ದಕ್ಕೂ ಹಾಕಿದ್ದರು.
ಯುವಕರು ಗುಡ್ಡೆಗೆ ಎರಡು ಸುತ್ತು ಪ್ರದಕ್ಷಿಣೆ ಹಾಕಿ ದೇವರನ್ನು ಸ್ಮರಿಸಿಕೊಂಡು, ತೆಂಗಿನ ಕಾಯಿ ಒಡೆದು ಪರಸ್ಪರ ಸಗಣಿ ಎರೆಚಾಡಿದರು. ಮಳೆಯನ್ನು ಲೆಕ್ಕಿಸದೆ ಕುಣಿದು ಕುಪ್ಪಳಿಸಿದರು.
ಹಬ್ಬಕ್ಕೆಂದು ಮಾವನ ಮನೆಗೆ ಬಂದಿದ್ದ ನವ ಜೋಡಿಗಳು ವಿವಿಧ ತರಹದ ತಿಂಡಿಗಳನ್ನು ತಿಂದು, ಮೋಜಿನ ಆಟ ನೋಡಿ ಆನಂದಿಸಿದರು. ಈ ಆಟ ನೋಡಲು ನಗರ ಅಲ್ಲದೆ ಸುತ್ತಮುತ್ತಲ ಊರು ಗಳಿಂದಲೂ ಜನರು ಆಗಮಿಸಿದ್ದರು.
`ತಲೆ ತಲೆ ಮಾರಿನಿಂದ ಈ ಆಟವನ್ನು ನಾಗರಪಂಚಮಿ ಮರುದಿನ `ಕರಿಕಟಂಬ್ಲಿ ದಿನ~ ಎಂದು ಆಚರಿಸ ಲಾಗುವುದು. ಪಂಚಮಿ ಹಬ್ಬಕ್ಕೆ ಆಗಮಿಸಿದ್ದ ಮಗಳು ಮತ್ತು ಅಳಿಯನಿಗೆ ಖುಷಿ ಪಡಿಸಲು ಈ ಮೋಜಿನ ಆಟ ನಾಲ್ಕೈದು ತಲೆಮಾರುಗಳಿಂದ ಆಚರಿಸುತ್ತ ಬರಲಾಗಿದೆ~ ಎಂದು ರಾಮಣ್ಣ ಬಿಂಗಿ ಹೇಳುತ್ತಾರೆ.
ಸಗಣಿ ಎರೆಚಾಟದಲ್ಲಿ ಕಾರ್ತಿಕ ಬಳ್ಳಾರಿ, ಬೆಳಧಡಿ, ನಾಗಪ್ಪ ಘಳಗಂಟಿ, ಲವಕುಮಾರ ಮಾರುತಿ ಗಳಗಂಟಿ, ಮಲ್ಲೇಶ ಕೊರ್ಲಹಳ್ಳಿ, ಬಸವರಾಜ ಇಂಜೇಟಿ, ಪರಶುರಾಮ ಕುಂಬಾರ, ಮಹಾಂತೇಶ ಹಾದಿಮನಿ, ಹನುಮಂತ ಜಡಿ, ಫಕೀರಪ್ಪ ಕೆರಿಯವರ, ಪ್ರದೀಪ ಕದಡಿ, ರಿಯಾಜ್ ದಾವಲಖಾನ್ ಭಾಗವಹಿಸಿದ್ದರು.