ಬೆಂಗಳೂರು: ‘ನರೇಂದ್ರ ಮೋದಿ ಅವರನ್ನು ಪ್ರಧಾಶನಿ ಅಭ್ಯರ್ಥಿಯನ್ನಾಗಿ ಬಿಜೆಪಿ ಘೋಷಿಸಿದೆ. ಆತ ಪ್ರಧಾನಿ ಆಗಿರುವ ಕಾಲಕ್ಕೆ ನಾನು ಬದುಕಿರಲು ಇಷ್ಟಪಡುವುದಿಲ್ಲ’ ಎಂದು ಹಿರಿಯ ಸಾಹಿತಿ ಯು.ಆರ್. ಅನಂತಮೂರ್ತಿ ಅತ್ಯಂತ ಖಾರವಾಗಿ ಹೇಳಿದರು.
ಭಾನುವಾರ ನಗರದಲ್ಲಿ ಏರ್ಪಡಿಸಿದ್ದ ಪ್ರೊ.ಬರಗೂರು ರಾಮಚಂದ್ರಪ್ಪ ಅವರ ‘ಅನುಸಂಧಾನ’ ಮತ್ತು ‘ದೇವರ ಗುಟ್ಟು’ ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಮೋದಿ ಪರ ಅಲೆ ಎನ್ನುವುದು ಕೇವಲ ಮಾಧ್ಯಮದ ಸೃಷ್ಟಿ’ ಎಂದು ಲೇವಡಿ ಮಾಡಿದರು.
‘ಕೋಮು ವಾದಿಗಳು, ಮುಖವಾಡ ಧರಿಸಿದವರು ಈ ದೇಶದ ಪ್ರಧಾನಿ ಆಗುವುದು ಬೇಕಿಲ್ಲ. ಆದ್ದರಿಂದಲೇ ಸಮಾಜವಾದಿ ಸಿದ್ಧಾಂತದ ಹಿನ್ನೆಲೆ ಹೊಂದಿರುವ ನಾನು ಒಂದು ಕಾಲಕ್ಕೆ ತೀವ್ರವಾಗಿ ವಿರೋಧಿಸಿದ್ದ ಕಾಂಗ್ರೆಸ್ ಬೆಂಬಲಕ್ಕೆ ನಿಂತಿದ್ದೇನೆ’ ಎಂದು ತಿಳಿಸಿದರು.
‘ಮೋದಿ ವಿರುದ್ಧ ಎಲ್ಲ ಜಾತ್ಯತೀತ ಶಕ್ತಿಗಳು ಒಗ್ಗೂಡಬೇಕು. ರಾಜ್ಯದಲ್ಲಿ ಎಸ್.ಎಂ. ಕೃಷ್ಣ ಅಂತಹ ಆಂದೋಲನದ ನೇತೃತ್ವ ವಹಿಸಿಕೊಳ್ಳಬೇಕು. ಕೋಮುವಾದದ ಎದುರು ಯುವಶಕ್ತಿಯನ್ನು ಕಟ್ಟಿ ನಿಲ್ಲಿಸಬೇಕು’ ಎಂದು ಹೇಳಿದರು.
‘ಮೋದಿ ಪ್ರಧಾನಿಯಾಗದಂತೆ ತಡೆಯುವ ಯತ್ನಗಳು ನಡೆಯಬೇಕು’ ಎಂದು ಅವರು ಪ್ರತಿಪಾದಿಸಿದರು.