ಅಹಮದಾಬಾದ್ (ಪಿಟಿಐ): ಧಾರ್ಮಿಕ ಸ್ಥಳಗಳ ಧ್ವಂಸಕ್ಕೆ ಸಂಬಂಧಿಸಿದಂತೆ ಹಾನಿ ಮತ್ತು ಪರಿಹಾರದ ಬಗ್ಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್ಎಚ್ಆರ್ಸಿ) ಸಲ್ಲಿಸಿರುವ ವರದಿಯನ್ನು ರಾಜ್ಯ ವಿಧಾನಸಭೆಯಲ್ಲಿ ಮಂಡಿಸದ ನರೇಂದ್ರ ಮೋದಿ ಸರ್ಕಾರವನ್ನು ಗುಜರಾತ್ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದ್ದು, `ಇದೊಂದು ಮಾನವ ಹಕ್ಕುಗಳ ಉಲ್ಲಂಘನೆಯ ಗಂಭೀರ ಲೋಪ~ ಎಂದು ಛೀಮಾರಿ ಹಾಕಿದೆ.
ಈ ಸಂಬಂಧ ಬುಧವಾರ ತೀರ್ಪು ನೀಡಿರುವ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಭಾಸ್ಕರ್ ಭಟ್ಟಾಚಾರ್ಯ ಮತ್ತು ನ್ಯಾಯಮೂರ್ತಿ ಜೆ.ಬಿ. ಪರ್ದಿವಿತ್ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠವು, `ಧಾರ್ಮಿಕ ಕಟ್ಟಡಗಳ ಪುನರ್ನಿರ್ಮಾಣಕ್ಕೆ ಸಂಬಂಧಿಸಿದಂತೆ ಗುಜರಾತ್ ಸರ್ಕಾರವು 2005ರ ಆರಂಭದಲ್ಲೇ ಎನ್ಎಚ್ಆರ್ಸಿಯ ವಾರ್ಷಿಕ ಮತ್ತು ಇತರ ವರದಿಗಳನ್ನು ಸ್ವೀಕರಿಸಿದ್ದರೂ ಸಹ, ಈವರೆಗೂ ರಾಜ್ಯ ವಿಧಾನಸಭೆಯಲ್ಲಿ ಅವುಗಳನ್ನು ಮಂಡಿಸಿಲ್ಲ ಮತ್ತು ವಿಳಂಬದ ಬಗ್ಗೆ ಯಾವುದೇ ಸ್ಪಷ್ಟನೆಯನ್ನೂ ನೀಡಿಲ್ಲ~ ಎಂದು ದೂಷಿಸಿದೆ.
`ರಾಜ್ಯ ಸರ್ಕಾರದಿಂದ ಆಗಿರುವ ಇಂತಹ ಗಂಭೀರ ಲೋಪವನ್ನು 1993ರ ಮಾನವ ಹಕ್ಕುಗಳ ರಕ್ಷಣಾ ಕಾಯ್ದೆಯ ಸೆಕ್ಷನ್ 20ರ ಸ್ಪಷ್ಟ ಉಲ್ಲಂಘನೆಯಾಗಿ ಪರಿಗಣಿಸಲಾಗುತ್ತದೆ~ ಎಂದು ನ್ಯಾಯಪೀಠ ಹೇಳಿದೆ. ಇದಲ್ಲದೆ, `ರಾಜ್ಯ ಸರ್ಕಾರವು ಪರಿಹಾರವನ್ನು ಹಾನಿಗೊಂಡ ವಸತಿ ಮತ್ತು ವಾಣಿಜ್ಯ ಸಂಕೀರ್ಣಗಳಿಗೆ ಮಾತ್ರ ಸೀಮಿತಗೊಳಿಸಿ, ಪೂಜಾ ಸ್ಥಳಗಳಿಗೆ ವಿಸ್ತರಿಸದಿರುವುದು ಸಂವಿಧಾನದ 14, 25 ಹಾಗೂ 26ನೇ ವಿಧಿಗಳಡಿ ಒದಗಿಸಿರುವ ಮೂಲಭೂತ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ~ ಎಂದೂ ಪೀಠ ತಿಳಿಸಿದೆ. ಗುಜರಾತ್ ಇಸ್ಲಾಮಿಕ್ ಪರಿಹಾರ ಸಮಿತಿಯ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಈ ತೀರ್ಪು ನೀಡಿದೆ.