ಯಳಂದೂರು: ಈಚೆಗೆ ಸುರಿದ ಮಳೆಯಿಂದ ಯರಿಯೂರು ಕೆರೆ ಏರಿ ಒಡೆದು ಕೆರೆಯ ನೀರೆಲ್ಲಾ ಖಾಲಿಯಾಗಿ ರುವುದರಿಂದ ಈ ಭಾಗದ ರೈತರಿಗೆ ಅನಾನುಕೂಲವಾಗಿದ್ದು, ಆದಷ್ಟು ಬೇಗ ಇದರ ದುರಸ್ತಿ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎ.ಎಂ. ಕುಂಜಪ್ಪ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಮಂಗಳವಾರ ಒಡೆದಿರುವ ಕೆರೆಯ ಏರಿಯ ದುರಸ್ತಿ ಕಾಮಗಾರಿ ಯನ್ನು ಪರಿಶೀಲಿಸಿ ಮಾತನಾಡಿದರು. ನಂತರ ಇದರ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಯನ್ನು ಪಡೆದರು. ತಹಶೀಲ್ದಾರ್ ಶಿವರಾಮು, ಉಪ ತಹಶೀಲ್ದಾರ್ ನಂಜಯ್ಯ, ಮಹದೇವಪ್ಪ ಇದ್ದರು.
ರೈತರ ಆಗ್ರಹ: ಯರಿಯೂರು ಕೆರೆಯು 750 ಎಕರೆ ಪ್ರದೇಶದಲ್ಲಿ ಹಬ್ಬಿದೆ. ಹಾಗಾಗಿ ಇದು ಇಷ್ಟೇ ಪ್ರಮಾಣದ ಜಮೀನಿಗೆ ನೀರುಣಿಸುತ್ತದೆ. ಆದರೆ, ಈಚೆಗೆ ಬಿದ್ದ ಮಳೆಯಿಂದ ಕೆರೆ ಏರಿ ಒಡೆದಿದೆ. ಯರಿಯೂರು ಹಾಗೂ ಕೆಸ್ತೂರು ಗ್ರಾಮದ ಕೆಲ ರೈತರ ಜಮೀನುಗಳಲ್ಲಿ ಹಾಕಲಾಗಿದ್ದ ಬತ್ತ, ರಾಗಿ ಹಾಗೂ ಕಬ್ಬಿನ ಫಸಲೂ ನಷ್ಟ ವಾಗಿದೆ. ಮುಂದೆ ಬೇಸಾಯ ಮಾಡ ಬೇಕಾದರೂ ಕೆರೆಯ ನೀರನ್ನೇ ನಂಬ ಬೇಕಾಗಿದೆ. ಹಾಗಾಗಿ ಆದಷ್ಟು ಬೇಗ ಈ ಕೆರೆಯ ಏರಿಯ ಕಾಮಗಾರಿಯನ್ನು ಪೂರ್ಣಗೊಳಿಸಿ ಇದಕ್ಕೆ ನೀರು ತುಂಬಿಸುವ ಕೆಲಸವನ್ನು ಮಾಡಬೇಕು.
ಜೊತೆಗೆ ರೈತರಿಗೆ ಆಗಿರುವ ಬೆಳೆ ನಷ್ಟವನ್ನು ತುಂಬಿಸಿಕೊಡಬೇಕಾದ ಜವಾಬ್ದಾರಿಯೂ ಸಂಬಂಧಪಟ್ಟ ಇಲಾಖೆ ಮೇಲಿದೆ ಹಾಗಾಗಿ ಈ ಬಗ್ಗೆ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕು ಎಂದು ಈ ಭಾಗದ ರೈತರಾದ ಮಹದೇವ, ಸೋಮಣ್ಣ, ಸ್ವಾಮಿ ಆಗ್ರಹಿಸಿದ್ದಾರೆ.