ಸರ್ಕಾರಿ ನೌಕರರ ‘ವರ್ಗಾವಣೆ ನಿಂತಿಲ್ಲ’ (ಪ್ರ.ವಾ. ಸೆ.8) ವರದಿಯನ್ನು ಓದಿದಾಗ ಯಾವ ಸರ್ಕಾರ ಬಂದರೂ ಒಂದೇ ಅಥವಾ ಯಾರೇ ಮುಖ್ಯ ಮಂತ್ರಿಯಾದರೂ ಒಂದೇ ಎಂಬ ಭಾವನೆ ಬಲಗೊಳ್ಳುತ್ತದೆ.
ವರ್ಗಾವಣೆ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದು ವೀರೇಂದ್ರ ಪಾಟೀಲ್ ಅವರು ಮುಖ್ಯ ಮಂತ್ರಿಯಾಗಿದ್ದಾಗ. ಗಡುವು ಮುಗಿದ ಬಳಿಕ ಯಾವ ವರ್ಗಾವಣೆಯನ್ನೂ ಮಾಡಲಿಲ್ಲ. ವರ್ಗಾವಣೆ ಪ್ರಕ್ರಿಯೆಯು ಏಪ್ರಿಲ್ಗೆ ಆರಂಭ ವಾಗಿ ಮೇ ಅಂತ್ಯದೊಳಗೆ ಮುಗಿದು ಹೋಗು ತ್ತಿತ್ತು. ವರ್ಗಾವಣೆ ಮಾರ್ಪಾಡುಗಳು ಆಗ ಅಪರೂಪದಲ್ಲಿ ಅಪರೂಪ. ಈಗ ವರ್ಗಾವಣೆ ಯಾಗಲೀ ಅಥವಾ ಉನ್ನತ ಹುದ್ದೆಗೆ ಬಡ್ತಿ ನೀಡುವುದಾಗಲೀ ಬಂಡವಾಳವಿಲ್ಲದ ವ್ಯಾಪಾರ. ಈ ವ್ಯಾಪಾರ ಸುದೀರ್ಘ ಅವಧಿಗೆ ಚಾಚಿ ಕೊಳ್ಳುತ್ತದೆ. ವರ್ಗಾವಣೆಯನ್ನು ಮೇ ೩೧ರ ನಂತರ ಮಾಡುವುದೇ ತಪ್ಪು.
ಶಾಲಾ ಕಾಲೇಜುಗಳಿಗೆ ಬೇಸಿಗೆ ರಜೆಯು ಮೇ ೩೧ಕ್ಕೆ ಸಾಮಾನ್ಯವಾಗಿ ಮುಗಿದು ವಿದ್ಯಾರ್ಥಿಗಳಿಗೆ ಮುಂದಿನ ತರಗತಿಗಳಿಗೆ ಹೋಗುವ ಸಮಯ. ಅಷ್ಟರೊಳಗೆ ವರ್ಗಾವಣೆ ಪ್ರಕ್ರಿಯೆ ಮುಗಿಯಬೇಕು. ಬೇರೆ ಊರುಗಳಲ್ಲಿ ಮುಂದಿನ ತರಗತಿಗಳಿಗೆ ಸೇರಬೇಕಾದ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಮೇ ೩೧ರ ನಂತರ ವರ್ಗಾವಣೆ ಮಾಡುವಂತಿಲ್ಲ ಎಂಬ ನಿಯಮವಿತ್ತು. ಆದರೆ ಈಗ ಆ ನಿಯಮವಿತ್ತು ಎಂಬ ಅಂಶವೇ ಮರೆತು ಹೋದಂತಾಗಿದೆ.
ಮನಸ್ಸಿಗೆ ಬಂದಾಗ ವರ್ಗಾವಣೆ ಮಾಡುವು ದರಿಂದ ಪೋಷಕರಿಗೆ ಮಕ್ಕಳನ್ನು ಸಕಾಲದಲ್ಲಿ ಶಾಲಾ ಕಾಲೇಜುಗಳಿಗೆ ಸೇರಿಸಲು ಬಹಳ ಅನನುಕೂಲವಾಗುತ್ತಿದ್ದರೂ ವಿಧಿ ಇಲ್ಲದೇ ಅದಕ್ಕೇ ಹೊಂದಿಕೊಂಡಿದ್ದಾರೆ. ವರ್ಗಾವಣೆ ಮಾಡಿಸಿಕೊಳ್ಳಲು ಅಥವಾ ಬೇಡವಾದ ವರ್ಗಾವಣೆಯನ್ನು ಆಗದಂತೆ ನೋಡಿಕೊಳ್ಳಲು ಲಂಚ ಕೊಡುವ ಮತ್ತು ತೆಗೆದುಕೊಳ್ಳುವ ಅಭ್ಯಾಸ ಬಹಳ ಕಾಲದಿಂದಲೇ ಇದೆ.
ವ್ಯತ್ಯಾಸವೇನೆಂದರೆ ಪ್ರತೀ ವರ್ಷ ಬೆಲೆ ಸೂಚ್ಯಂಕ ಏರಿಕೆಗೆ ಅನುಗುಣವಾಗಿ ಲಂಚವನ್ನು ಸಂಬಂಧಪಟ್ಟವರಿಗೆ ನೀಡಬೇಕಾಗಿದೆ. ಲಂಚ ವಾಗಿ ನೀಡಿದ ಹಣವನ್ನು ಲಂಚದ ಮೂಲಕವೇ ಸಂಪಾದಿಸಬೇಕಿದೆ.