ಮಸ್ಕಿ: ಸಮೀಪದ ರಂಗಾಪುರ ಗ್ರಾಮದ ಸಿದ್ಧಾಂತಿ ಮಠದಲ್ಲಿ ಸೋಮವಾರ ವೀರಭದ್ರ ದೇವರ 17ನೇ ಜಾತ್ರಾ ಮಹೋತ್ಸವ ಜರುಗಿತು.
ವೀರಭದ್ರ ದೇವರ ವೀರಕಾಶಿ ಧರಿಸಿದ ಚಂದ್ರಶೇಖರಯ್ಯ, ವೀರಯ್ಯ ಸ್ವಾಮಿ ಮುಖಾಮುಖಿಯಾಗಿ “ಭಕ್ತಾಧಿಗಳೇ ದಕ್ಷನ ಶಿರವನ್ನಿರಿದು, ಕುರಿದಲೆಯನ್ನಿತ್ತು ಕಾಪಾಡಿದ ಶ್ರೀ ವೀರಭದ್ರನು ಅಡಿಗಡಿಗೂ ರೌದ್ರವತಾರವನು ತಾಳುತ, ಕಾಲಲ್ಲಿ ಕಾಲ್ಚೆಂಡು, ಕೈಯಲ್ಲಿ ಕತ್ತಿ, ಕಠಾರಿ, ಖಡ್ಗ, ಶಸ್ತ್ರ ಧರಿಸಿ ದುಷ್ಟರನ್ನು ಶಿಕ್ಷಕಿ, ಶಿಷ್ಟರನ್ನು ರಕ್ಷಿಸಿ ಬೇಡಿದವರಿಗೆ ಬೇಡಿದ್ದನ್ನು ಕೊಡುವ ವೀರಭದ್ರನನ್ನು ಪೂಜಿಸಿ ಪಾವನರಾಗಿ” ಎಂದು ಸಂವಾದ ರೂಪದ ಒಡಪು ಹೇಳಿ ವೀರಭದ್ರ ಗುಣ ಗಾನ ಮಾಡಿದರು.
ಶ್ರೀ ಮಠದಿಂದ ಹೊರಟ ಮೆರವಣಿಗೆಯಲ್ಲಿ ಮಹಿಳೆಯರು ಶಸ್ತ್ರ ಹಾಕಿಸಿಕೊಂಡು ಕಳಸದೊಂದಿಗೆ ಭಾಗವಹಿಸಿದ್ದರು. ಶಿವಭಜನೆ, ಡೊಳ್ಳು ಕುಣಿತ, ನಂದಿ ಕುಣಿತ, ಪುರವಂತರ ನೃತ್ಯ ನೋಡುಗರನ್ನು ಆಕರ್ಷಿಸಿತು. ನಂತರ ಜಂಗಮ ವಟುಗಳಿಗೆ ಅಯ್ಯಾಚಾರ, ಮದುವೆ ಕಾರ್ಯಕ್ರಮ ಜರುಗಿತು.
ಹರಗುರು ಚರಮೂರ್ತಿಗಳು ಹಾಗೂ ರಂಗಾಪುರ, ಹಸ್ಮಕಲ್, ಗುಡದೂರು, ಮಸ್ಕಿ, ಗೋನಾಳ, ಸಿಂಧನೂರು, ರೋಡಲಬಂಡಾ, ಲಿಂಗಸುಗೂರು ಗ್ರಾಮಗಳಿಂದ ಶ್ರೀಮಠದ ಭಕ್ತರು ಆಗಮಿಸಿದ್ದರು.