ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ತ ಕ್ಯಾನ್ಸರ್‌ನಿಂದ ಬಳಲುತ್ತಿರುವ ಪ್ರತಿಭಾವಂತ ವಿದ್ಯಾರ್ಥಿ

Last Updated 12 ಜುಲೈ 2012, 19:10 IST
ಅಕ್ಷರ ಗಾತ್ರ

ಹೊಳಲ್ಕೆರೆ: `ಇವನು ತರಗತಿಯಲ್ಲಿ ತುಂಬಾ ಚೂಟಿ ಹುಟುಗ. ಆಟ, ಪಾಠಗಳಲ್ಲಿ ಉತ್ಸಾಹದಿಂದ ಭಾಗವಹಿಸುತ್ತಾನೆ. ಎಲ್ಲಾ ವಿಷಯಗಳನ್ನೂ ಚೆನ್ನಾಗಿ ಓದುತ್ತಾನೆ. ಶಿಕ್ಷಕರು ಕೇಳಿದ ಪ್ರಶ್ನೆಗಳಿಗೆ ಚಟಪಟನೆ ಉತ್ತರಿಸುತ್ತಾನೆ. ಇವನ ಕಣ್ಣುಗಳಲ್ಲಿ ಓದುವ ಹಂಬಲವಿದೆ. ಏನನ್ನಾದರೂ ಸಾಧಿಸುವ ಛಲವಿದೆ. ಪಠ್ಯ ಹಾಗೂ ಪಠ್ಯೇತರ ಎರಡರಲ್ಲೂ ಪ್ರತಿಭಾವಂತ. ಇವನು ಶಿಕ್ಷಕರ ಮತ್ತು ಸಹಪಾಠಿಗಳ ಅಚ್ಚುಮೆಚ್ಚಿನ ವಿದ್ಯಾರ್ಥಿ....~ ಆದರೆ, ಇವನ ದೇಹದೊಳಗೆ ಮಾತ್ರ ಭಯಾನಕ ಕಾಯಿಲೆಯೊಂದು ಸದ್ದಿಲ್ಲದೆ ಸೇರಿಕೊಂಡಿದೆ.

ತಾಲ್ಲೂಕಿನ ತೊಡರನಾಳ್ ಗ್ರಾಮದ ನವೀನ್ ಎಂಬ 13 ವರ್ಷದ ಬಾಲಕ ಎಳೆವಯಸ್ಸಿನಲ್ಲೇ ರಕ್ತ ಕ್ಯಾನ್ಸರ್ ಎಂಬ ಮಾರಣಾಂತಿಕ ಕಾಯಿಲೆಗೆ ತುತ್ತಾಗಿದ್ದಾನೆ! ಚಿತ್ರಹಳ್ಳಿಯ ಶರಣ ಬಸವೇಶ್ವರ ಪ್ರೌಢಶಾಲೆಯಲ್ಲಿ 8ನೇ ತರಗತಿ ಓದುತ್ತಿರುವ ಈ ವಿದ್ಯಾರ್ಥಿ 1 ವರ್ಷದಿಂದ `ಅಕ್ಯೂಟ್ ಪ್ರೋಮೋ ಲೋಸಿಟಿಕ್ ಲ್ಯೂಕಿಮಿಯಾ~ (ಒಂದು ಬಗೆಯ ರಕ್ತ ಕ್ಯಾನ್ಸರ್) ಎಂಬ ಕಾಯಿಲೆಗೆ ತುತ್ತಾಗಿದ್ದಾನೆ. ತೀರಾ ಬಡಕುಟುಂಬದ ಈ ವಿದ್ಯಾರ್ಥಿಯ ತಂದೆಯೂ ಕಳೆದ ಆರು ತಿಂಗಳ ಹಿಂದೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅಕ್ಕ ಕೂಡ ಇದೇ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದಾಳೆ. ತಾಯಿ ಗೌರಮ್ಮ ಮಗನಿಗೆ ಚಿಕಿತ್ಸೆ ಕೊಡಿಸಲಾರದೆ ದಿಕ್ಕು ತೋಚದಂತಾಗಿದ್ದಾರೆ.

ವಿದ್ಯಾರ್ಥಿಯನ್ನು ಪರೀಕ್ಷಿಸಿದ ಮಣಿಪಾಲ್‌ನ ಕಸ್ತೂರಬಾ ಆಸ್ಪತ್ರೆಯ ವೈದ್ಯರು ಕಾಯಿಲೆಯನ್ನು ಶೇ.90ರಷ್ಟು ಗುಣಪಡಿಸಬಹುದು. ಆದರೆ ಚಿಕಿತ್ಸೆಗಾಗಿ ಸುಮಾರು ್ಙ 4ರಿಂದ 5 ಲಕ್ಷ ಖರ್ಚಾಗುತ್ತದೆ ಎಂದು ಹೇಳಿದ್ದಾರೆ. ಅದರಂತೆ ತಾಯಿ ಗೌರಮ್ಮ ಮಗನಿಗೆ ಆಸ್ಪತ್ರೆಯಲ್ಲಿ ತಿಂಗಳುಗಟ್ಟಲೆ ಚಿಕಿತ್ಸೆ ಕೊಡಿಸಿದ್ದಾರೆ. ಇದಕ್ಕಾಗಿ ಸುಮಾರು ್ಙ ಮೂರ‌್ನಾಲ್ಕು ಲಕ್ಷ ಖರ್ಚುಮಾಡಿದ್ದಾರೆ. ಆದರೂ, ಮಗನ ಕಾಯಿಲೆ ಗುಣಮುಖವಾದ ಖಾತರಿ ಸಿಕ್ಕಿಲ್ಲ. ತಿಂಗಳಿಗೊಮ್ಮೆ ಆಸ್ಪತ್ರೆಗೆ ಹೋಗಿ ರಕ್ತ ಪರೀಕ್ಷೆ ಮಾಡಿಸಬೇಕು. ಇದಕ್ಕಾಗಿ ಪ್ರತೀ ಬಾರಿಯೂ ್ಙ 10ರಿಂದ 15 ಸಾವಿರ ಹಣ ಬೇಕಾಗುತ್ತದೆ.

`ಕಳೆದ ವರ್ಷ ಒಂದು ದಿನ ನವೀನ್ ಹಲ್ಲುಜ್ಜಿದಾಗ ರಕ್ತ ಬಂತು. ಆಗ ಚಿತ್ರದುರ್ಗದಲ್ಲಿ ವೈದ್ಯರಿಗೆ ತೋರಿಸಿದೆವು. ಅವರು ದಾವಣಗೆರೆಗೆ ಕಳುಹಿಸಿದರು. ಅಲ್ಲಿ ರಕ್ತಪರೀಕ್ಷೆ ಮಾಡಿದ ವೈದ್ಯರು ಇವನಿಗೆ ಬ್ಲಡ್‌ಕ್ಯಾನ್ಸರ್ ಇದೆ, ಮಣಿಪಾಲ್ ಆಸ್ಪತ್ರೆಗೆ ಹೋಗಿ ಎಂದರು. ಆಗ ಮಗನನ್ನು ಮಣಿಪಾಲ್ ಆಸ್ಪತ್ರೆಗೆ ಸೇರಿಸಿದೆವು. ಅಲ್ಲಿ 2 ತಿಂಗಳು ಇದ್ದೆವು. ಇದಕ್ಕಾಗಿ ಸುಮಾರು ್ಙ ಎರಡೂವರೆ ಲಕ್ಷ ಖರ್ಚಾಯಿತು~ ಎನ್ನುತ್ತಾರೆ ತಾಯಿ ಗೌರಮ್ಮ.

ಇರುವ ಎರಡು ಎಕರೆ ಹೊಲದಲ್ಲಿ ಬೆಳೆ ಬೆಳೆದು ಎರಡು ವರ್ಷ ಆಯಿತು. ಮಾಡಿದ ಸಾಲಕ್ಕೆ ಬಡ್ಡಿ ಬೆಳೆಯುತ್ತಿದೆ. ನಾವು ಕಷ್ಟದಲ್ಲಿ ಇರುವಾಗಲೇ ಪತಿ ನಾಗರಾಜಪ್ಪ ಟ್ರ್ಯಾಕ್ಟರ್ ಕೆಳಗೆ ಬಿದ್ದು ಸತ್ತುಹೋದರು. ಈಗ ನಾನೊಬ್ಬಳೇ ಆಗಿದ್ದು, ಮಗನಿಗೆ ಚಿಕಿತ್ಸೆ ಕೊಡಿಸಲಾರದೆ ಕೊರಗುತ್ತಿದ್ದೇನೆ. ಇದರ ನಡುವೆಯೇ ಇಬ್ಬರು ಮಕ್ಕಳನ್ನು ಓದಿಸಬೇಕು. ಅವರಿಗೆ ಬಟ್ಟೆ, ಪುಸ್ತಕ ಕೊಡಿಸಲೂ ಹಣವಿಲ್ಲ. ಕೂಲಿನಾಲಿ ಮಾಡಿ ಜೀವನ ನಡೆಸುತ್ತಿದ್ದೇವೆ ಎಂದು ಹತಾಶರಾಗಿ ನುಡಿಯುತ್ತಾರೆ ಅವರು.

`ನವೀನ್ ಬುದ್ದಿವಂತ ಹುಡುಗ. ಇನ್ನೂ ಚಿಕ್ಕವನಾಗಿರುವುದರಿಂದ ಅವನಿಗೆ ಕಾಯಿಲೆ ಇರುವ ಬಗ್ಗೆ ಯಾವುದೇ ಅಳುಕಿಲ್ಲ. ಓದಿನೊಂದಿಗೆ ಆಟಗಳಲ್ಲೂ ಸಕ್ರಿಯವಾಗಿ ಭಾಗವಹಿಸುತ್ತಾನೆ. ಆದರೆ ಬಡಕುಟುಂಬ ಆಗಿರುವುದರಿಂದ ಚಿಕಿತ್ಸೆಗೆ ಹಣವಿಲ್ಲದೆ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ತಂದೆ ಇಲ್ಲದಿರುವುದರಿಂದ ಸಾಲವೂ ಹುಟ್ಟುತ್ತಿಲ್ಲ. ಈ ನೊಂದ ಬಡ ಕುಟುಂಬ ಆರ್ಥಿಕ ಸಹಾಯದ ನಿರೀಕ್ಷೆಯಲ್ಲಿದೆ~ ಎನ್ನುತ್ತಾರೆ ಶಾಲೆಯ ಶಿಕ್ಷಕ ಎಚ್.ಎಂ. ಶಿವಮೂರ್ತಯ್ಯ.

ವಿದ್ಯಾರ್ಥಿಗೆ ನೆರವು ನೀಡಲು ಬಯಸುವವರು ಚಿತ್ರಹಳ್ಳಿಯ ವಿಜಯಾ ಬ್ಯಾಂಕ್‌ನಲ್ಲಿರುವ ನವೀನ್‌ನ ಉಳಿತಾಯ ಖಾತೆ ಸಂಖ್ಯೆ: 136201111000353 ಗೆ ಹಣ ಸಂದಾಯ ಮಾಡಬಹುದು. ಮೊಬೈಲ್ ನಂ: 94813 43963 ವಿದ್ಯಾರ್ಥಿಯನ್ನು ಸಂಪರ್ಕಿಸಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT