ಮಡಿಕೇರಿ: ಜಿಲ್ಲೆಯಲ್ಲಿ ರಸಗೊಬ್ಬರ ಮುಂಗಡ ದಾಸ್ತಾನು ಮಾಡುವುದಕ್ಕೆ ಸಂಬಂಧಿಸಿದಂತೆ ವ್ಯವಸಾಯ ಸೇವಾ ಸಹಕಾರ ಸಂಘಗಳ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಎಚ್. ಅಶ್ವತ್ಥನಾರಾಯಣಗೌಡ ಭರವಸೆ ನೀಡಿದ್ದಾರೆ.ಕೃಷಿ, ಸಹಕಾರ ಇಲಾಖೆ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕೊಡಗು ಜಿಲ್ಲಾ ಸಹಕಾರ ಯೂನಿಯನ್ನ ಸಂಯುಕ್ತ ಆಶ್ರಯದಲ್ಲಿ 2011-12ನೇ ಸಾಲಿನಲ್ಲಿ ರಸಗೊಬ್ಬರವನ್ನು ಮುಂಗಡ ದಾಸ್ತಾನು ಮಾಡುವ ಕುರಿತು ಶುಕ್ರವಾರ ನಗರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವ್ಯವಸಾಯ ಸೇವಾ ಸಹಕಾರ ಸಂಘಗಳ ವಿವಿಧ ಬೇಡಿಕೆಯಂತೆ ರಸಗೊಬ್ಬರ ಪೂರೈಕೆ, ಸಾರಿಗೆ ವೆಚ್ಚದಲ್ಲಿ ಸಡಿಲ ಮತ್ತು ಮುಂಗಡ ಹಣ ಪಾವತಿ ತಡೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರ್ಕಾರವೇ ಬಗೆಹರಿಸಬೇ ಕಿರುವುದರಿಂದ ಮನವಿ ಸಲ್ಲಿಸಿ ಸಮಸ್ಯೆ ಇತ್ಯರ್ಥಪಡಿಸಲು ಪ್ರಯತ್ನಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಆಶ್ವಾಸನೆ ನೀಡಿದರು.
ಜಿಲ್ಲೆಯಲ್ಲಿ ರಸಗೊಬ್ಬರದ ಬೇಡಿಕೆ ಹಾಗೂ ಅವಲಂಬನೆ ಹೆಚ್ಚಾಗುತ್ತಲೇ ಇದೆ. ಆದರೆ, ಉತ್ಪಾದನೆ ಮಾತ್ರ ಯಥಾಸ್ಥಿತಿ ಇರುವುದು ಕಂಡು ಬರುತ್ತಿದೆ. ಆದ್ದರಿಂದ ರೈತರು ಸಾವಯವ ಕೃಷಿಯನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. ಸಾವಯವ ಕೃಷಿಗೆ ಸರ್ಕಾರ ಹೆಚ್ಚಿನ ಉತ್ತೇಜನ ನೀಡುತ್ತಿದ್ದು, ಅದರ ಪ್ರಯೋಜನವನ್ನು ರೈತರು ಬಳಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎಂ.ಪಿ. ಮುತ್ತಪ್ಪ, ಮೈಸೂರು, ಹಾಸನ ಹಾಗೂ ಮಂಗಳೂರಿನಿಂದ ರಸಗೊಬ್ಬರ ಸರಬರಾಜಾಗುತ್ತಿದ್ದು, ಜಿಲ್ಲೆಯ ಗ್ರಾಮೀಣ ಪ್ರದೇಶದ ವ್ಯವಸಾಯ ಸೇವಾ ಸಹಕಾರ ಸಂಘಗಳಿಗೆ ರಸಗೊಬ್ಬರ ತಲುಪುವುದಕ್ಕೆ ಸಾರಿಗೆ ವೆಚ್ಚ ಹೆಚ್ಚಾಗುತ್ತಿದೆ. ಇದರಿಂದ ನಿಗದಿತ ಬೆಲೆಗಿಂತ ಜಿಲ್ಲೆಯಲ್ಲಿ ರಸಗೊಬ್ಬರ ಬೆಲೆ ಹೆಚ್ಚಾಗುತ್ತಿದೆ ಎಂದು ಜಿಲ್ಲಾಡಳಿತದ ಗಮನಸೆಳೆದರು.
ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ನಿರ್ದೇಶಕ ಪುದಿಯೊಕ್ಕಡ ಬೆಲ್ಲುಸೋಮಯ್ಯ, ಜಂಟಿ ಕೃಷಿ ನಿರ್ದೇಶಕ ಸಿ.ಕೆ. ದೇವದಾಸ್, ಸಹಕಾರ ಸಂಘಗಳ ಉಪ ನಿಬಂಧಕ ಗುರುಸ್ವಾಮಿ, ಬೆಟ್ಟಗೇರಿ ವಿಎಸ್ಎಸ್ಎನ್ ಅಧ್ಯಕ್ಷ ತಳೂರು ಕಿಶೋರ್ಕುಮಾರ್, ಭಾಗಮಂಡಲ ವಿಎಸ್ಎಸ್ಎನ್ ಅಧ್ಯಕ್ಷ ಸತೀಶ್ಕುಮಾರ್, ಶನಿವಾರಸಂತೆ, ಸುಂಟಿಕೊಪ್ಪ, ಕಡಗದಾಳು ಮೊದಲಾದ ವಿಎಸ್ಎಸ್ಎನ್ ಬ್ಯಾಂಕ್ನ ಪ್ರತಿನಿಧಿಗಳು ಕೊಡಗು ಜಿಲ್ಲೆಗೆ ಅಗತ್ಯವಿರುವ ರಸಗೊಬ್ಬರವನ್ನು ಸಕಾಲದಲ್ಲಿ ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕ್ರಿಬ್ಕೋ, ಇಪ್ಕೋ, ಕೋರಮಂಡಲ, ಆರ್ಸಿಎಫ್, ಎಂಸಿಎಫ್, ಜುವಾರಿ, ಫ್ಯಾಕ್ಟ್, ಐಪಿಎಲ್, ಟಿಎಫ್ಸಿಎಲ್, ಸಿಪಿಎಫ್, ಎಂಎಫ್ಎಲ್ ಮತ್ತಿತರ ರಸಗೊಬ್ಬರ ಕಂಪೆನಿಗಳ ಪ್ರತಿನಿಧಿಗಳು ಜಿಲ್ಲೆಗೆ ಅಗತ್ಯವಿರುವ ರಸಗೊಬ್ಬರವನ್ನು ಸಕಾಲದಲ್ಲಿ ಪೂರೈಸುವ ಭರವಸೆ ನೀಡಿದವು.
ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ಪಿ.ಎಲ್. ಜ್ಯೋತೀಂದ್ರ, ಸಹಕಾರ ಸಂಘಗಳ ಲೆಕ್ಕಪರಿಶೋಧಕ ಷಣ್ಮುಗಸ್ವಾಮಿ, ಕ್ರಿಬ್ಕೋ ಮುಖ್ಯ ಮಾರಾಟ ವ್ಯವಸ್ಥಾಪಕ ಮಹಮದ್ ಅಖ್ತರ್ ಜುಮಾನ್ ಮಾತನಾಡಿದರು. ಸಹಕಾರ ಸಂಘಗಳ ಸಹಾಯಕ ನಿಬಂಧಕ ಜಿ. ಜಗದೀಶ ಉಪಸ್ಥಿತರಿದ್ದರು. ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಕುಶಾಲನಗರ ಶಾಖೆಯ ವ್ಯವಸ್ಥಾಪಕ ಬಿ.ಎ. ಚಿಣ್ಣಪ್ಪ ಸ್ವಾಗತಿಸಿದರು. ಜಿಲ್ಲಾ ಸಹಕಾರ ಯೂನಿಯನ್ ಸಿಇಓ ಯೋಗೇಂದ್ರ ನಾಯಕ ಪ್ರಾರ್ಥಿಸಿ, ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.