ಮಂಡ್ಯ: ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ರಾಜ್ಯಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಮೈಸೂರು ವಿಭಾಗದ ವಿದ್ಯಾರ್ಥಿಗಳು ಪ್ರಥಮ ಸ್ಥಾನವನ್ನು ಗೆದ್ದುಕೊಂಡರು.
ಕನ್ನಡ, ಇಂಗ್ಲಿಷ್, ವಿಜ್ಞಾನ, ಸಮಾಜ ಶಾಸ್ತ್ರ, ಚಿತ್ರಪಟ, ಸಾಮಾನ್ಯ ಜ್ಞಾನ ಮತ್ತು ಕ್ಷಿಪ್ರ ಸುತ್ತುಗಳಲ್ಲಿ ನಡೆದ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಮೈಸೂರು ವಿಭಾಗದ ವಿದ್ಯಾರ್ಥಿಗಳು 62 ಅಂಕಗಳನ್ನು ಗಳಿಸುವ ಮೂಲಕ ಮೊದಲ ಸ್ಥಾನ ಪಡೆದರು. ಹಾಸನ ಜಿಲ್ಲೆ ಕಲ್ಯಾಡಿಯ ಎಂ.ವೈ.ಪವನಗೌಡ, ದಕ್ಷಿಣ ಕನ್ನಡ ಜಿಲ್ಲೆ ಬೆಳವಾರುವಿನ ವಿದ್ಯಾಗಾಯತ್ರಿ ಮತ್ತು ಕನ್ಯಾನದ ಶ್ರೀದೇವಿ ಅವರು ಮೈಸೂರು ವಿಭಾಗವನ್ನು ಪ್ರತಿನಿಧಿಸಿದ್ದರು.
ಉಳಿದಂತೆ, ಬೆಳಗಾವಿ ವಿಭಾಗ 58 ಅಂಕಗಳೊಂದಿಗೆ ದ್ವಿತೀಯ, ಬೆಂಗಳೂರು ವಿಭಾಗ 56 ಅಂಕಗಳೊಂದಿಗೆ ತೃತೀಯ ಮತ್ತು ಗುಲ್ಬರ್ಗಾ ವಿಭಾಗ 44 ಅಂಕಗಳೊಂದಿಗೆ 4ನೇ ಸ್ಥಾನ ಪಡೆಯಿತು.
ಜಿಲ್ಲಾ ಹಂತಗಳಲ್ಲಿ ಜಯಗಳಿಸಿದ 170 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದರು. ಇವರಲ್ಲಿ ಲಿಖಿತ ಪರೀಕ್ಷೆ ಮೂಲಕ ವಿಭಾಗೀಯ ತಂಡಗಳಿಗೆ ತಲಾ 12 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿದ್ದು, ವಿಭಾಗಾವಾರು ರಸಪ್ರಶ್ನೆ ಸ್ಪರ್ಧೆ ನಡೆಸಿ ಆಯಾ ವಿಭಾಗದಿಂದ ಮೂವರನ್ನು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆ ಮಾಡಲಾಯಿತು.
ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಉಳಿದ ವಿಭಾಗಗಳನ್ನು ಪ್ರತಿನಿಧಿಸಿದ ವಿದ್ಯಾರ್ಥಿಗಳ ವಿವರ ಹೀಗಿದೆ.
ಬೆಳಗಾವಿ ವಿಭಾಗ: ಕಾರವಾರ ಜಿಲ್ಲೆಯ ಗುಡ್ಡಬಾಳ ಹೊನ್ನಾದರದ ನಿತಿನ್ ಚಿಂತಾಮಣಿ ಕಲ್ಲಪ್ಪ, ಶಿರಸಿಯ ಕುಡಗಂದ ಸಿದ್ದಾಪುರದ ಪ್ರಣವ್ ಅಶೋಕ್ ಭಟ್, ಧಾರಡಾರ ಜಿಲ್ಲೆ ಕಲಘಟಗಿಯ ಕಲ್ಮೇಶ ಬಿ.ನಾಗನೂರ.
ಬೆಂಗಳೂರು ವಿಭಾಗ: ಚಿತ್ರದುರ್ಗ ಜಿಲ್ಲೆ ಕಣಜನಹಳ್ಳಿಯ ಎಂ.ಪಿ.ದರ್ಶನ್ಕುಮಾರ್, ಬೆಂಗಳೂರು ಗ್ರಾಮಾಂತರ ಜಿಲ್ಲೆ ಅರೆಬೊಮ್ಮನಹಳ್ಳಿಯ ಎಸ್.ಜಯಶ್ರೀ, ಬೆಂಗಳೂರು ದಕ್ಷಿಣ ಚಿನ್ನಕುಚಿಯ ಸಿ.ವಿ.ರಾಜೇಶ್.
ಗುಲ್ಬರ್ಗ ವಿಭಾಗ: ಕೊಪ್ಪಳ ಜಿಲ್ಲೆ ಬಳೂಟಗಿಯ ಪ್ರವೀಣಕುಮಾರ್, ರಾಯಚೂರು ಜಿಲ್ಲೆ ಮಾನವಿ ಸಂಗಾಪುರದ ಉಮೇಶ್, ಗುಲ್ಬರ್ಗ ಜಿಲ್ಲೆ ಅಫಜಲಪುರ ಕರಜಗಿಯ ಅಸ್ಲಂ ಬಾಬಾ ಕಸಾಬ.