ಬೀದರ್: ಮೂರು, ಮೂರುವರೆ ವರ್ಷಗಳ ಹಿಂದಷ್ಟೇ ನಿರ್ಮಾಣವಾದ,ನಗರದ ಬಹುತೇಕ ರಸ್ತೆಗಳ ಗುಣಮಟ್ಟ ನಗರದಲ್ಲಿ ಕಳೆದೊಂದು ವಾರದಿಂದ ಸುರಿದ ನಿರಂತರ ಮಳೆಯಿಂದಾಗಿ ಬಯಲಿಗೆ ಬಂದಿದೆ. ಅಲ್ಲಲ್ಲಿ ಗುಂಡಿಗಳು ಬಿದ್ದಿರುವ ಕಾರಣ ನಗರ ಸಂಚಾರ ಈಗ ನರಕ ಸಂಚಾರದ ಅನುಭವ ನೀಡುತ್ತದೆ.
ಅನುಭವಿ ಚಾಲಕರು ಕೂಡಾ ಪ್ರಯಾಸಪಟ್ಟು ವಾಹನಗಳನ್ನು ಚಲಾಯಿಸಬೇಕಾದ ಅನಿವಾರ್ಯತೆ ಈಗ ಇದೆ. ಸ್ಥಳೀಯ ಮುಖಂಡರ ಪ್ರಕಾರ, ಸುಮಾರು ಮೂರುವರೆ ಹಿಂದಷ್ಟೇ, ರಸ್ತೆ ಅಗಲೀಕರಣ ಸಂದರ್ಭ ಮತ್ತು ನಂತರದ ದಿನಗಳಲ್ಲಿ ಈ ಎಲ್ಲ ರಸ್ತೆ ನಿರ್ಮಾಣವಾಗಿವೆ.
ಕಳೆದ ವರ್ಷ ಮಳೆ ಬಂದರೂ ರಸ್ತೆಯ ಗುಣಮಟ್ಟ ಬಯಲಿಗೆ ತರುವ ನಿಟ್ಟಿನಲ್ಲಿ ಆಗಿರಲಿಲ್ಲ. ಈ ಬಾರಿ ವ್ಯತಿರಿಕ್ತ ಪರಿಸ್ಥಿತಿ. ಮಳೆ ನಿಂತ ನಂತರ ಈಗ ರಸ್ತೆ ಅವ್ಯವಸ್ಥೆ ಜನರನ್ನು, ಚಾಲಕರನ್ನು ಬಾಧಿಸುತ್ತಿದೆ. ವಾಹನಗಳ ಓಡಾಟ ಹೆಚ್ಚಿದಂತೆ ಸಣ್ಣ ಪ್ರಮಾಣದ ಗುಂಡಿಗಳಲ್ಲಿನ ಜಲ್ಲಿ ಕಲ್ಲು ಹರಡಿ ರಸ್ತೆಯಲ್ಲಿ ವಿಸ್ತಾರಗೊಂಡಿದ್ದು, ದ್ವಿಚಕ್ರ ವಾಹನ ಚಾಲಕರು ಸ್ವಲ್ಪ ನಿಯಂತ್ರಣ ತಪ್ಪಿದರೂ ಬೀಳುವ ಸ್ಥಿತಿ ಇದೆ.
ಇದೇ ರಸ್ತೆಗಳ ಮೂಲಕ ಜನಪ್ರತಿನಿಧಿಗಳು, ಅಧಿಕಾರಿಗಳು ಓಡಾಡುತ್ತಾರೆ. ಆದರೂ ಈ ಅವ್ಯವಸ್ಥೆಗೆ ಕಾಯಕಲ್ಪ ನೀಡುವ ಕಾಲ ಕೂಡಿ ಬಂದಿಲ್ಲ. ಶಾಸಕ ಗುರುಪಾದಪ್ಪ ನಾಗಮಾರಪಳ್ಳಿ ಅವರಿಗೆ ಇದನ್ನು ಮಾದರಿ ಕ್ಷೇತ್ರ ಮಾಡುವ ಗುರಿ. ರಸ್ತೆ ಸುಧಾರಣೆಯೊಂದಿಗೆ ಈ ಕಾರ್ಯ ಆರಂಭವಾಗಲಿ ಎಂಬುದು ಸಾರ್ವಜನಿಕರ ನಿರೀಕ್ಷೆ. ನಗರದ ವಿವಿಧ, ಪ್ರಮುಖ ರಸ್ತೆಗಳಲ್ಲಿನ ಅವ್ಯವಸ್ಥೆಯನ್ನು ಕುರಿತ ಚಿತ್ರನೋಟ ಇಲ್ಲಿದೆ.