‘ಚಿಕ್ಕ ಬಳ್ಳಾಪುರದಲ್ಲಿ ರಸ್ತೆಯಲ್ಲಿ ಕಣದ ಕೆಲಸ ಮಾಡುತ್ತಿದ್ದ ಮೂವರು ಮಹಿಳೆಯರ ಸಾವು’ (ಪ್ರವಾ ಜ.10) ವರದಿ ನೋಡಿದಾಕ್ಷಣ ನನಗೆ ನೋವಾಯಿತು ಹಳ್ಳಿಯ ಮುಗ್ಧಜನರ ಮಾರಣ ಹೋಮಕ್ಕೆ ಕಾರಣರಾರು ಎಂದು ಯೋಚಿಸುತ್ತಿದ್ದಾಗ ನೆನಪಾದದ್ದು ನನ್ನೂರಿನ ಕಥೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ, ಕೌಡ್ಲೆ ನನ್ನ ಗ್ರಾಮ ಕಳೆದ ವಾರ ಊರಿಗೆ ಹೋಗಿದ್ದಾಗ ರಸ್ತೆಯುದ್ದಕ್ಕೂ ಬತ್ತ ಮತ್ತು ರಾಗಿಯ ಒಕ್ಕಣೆಗಾಗಿ ಕಣಗಳನ್ನು ಮಾಡಿಕೊಂಡಿರುವುದು ಕಂಡುಬಂತು.
ಮಳೆಗಾಲದಲ್ಲಿ ಕಣ ಮಾಡಿಕೊಳ್ಳಲು ಸಾಧ್ಯವಾಗದ ಸ್ಥಿತಿಯಲ್ಲಿ ಡಾಂಬರು ರಸ್ತೆಯಲ್ಲಿ ಒಕ್ಕಣೆಯ ಕೆಲಸಗಳನ್ನು ನಿರ್ವಹಿಸಿಕೊಳ್ಳುತ್ತಿದ್ದ ಕಾಲವೊಂದಿತ್ತು. ಆದರೆ ಕಾಲಕ್ರಮೇಣ ಜನರು ಹೇಗೆ ಸೋಮಾರಿಗಳಾಗುತ್ತಿದ್ದಾರೆ ಎಂದರೆ ತಮ್ಮ ಹೊಲ ಗದ್ದೆಗಳಲ್ಲಿ ಒಂದಿಷ್ಟಗಲ ಕಣ ಮಾಡಿಕೊಳ್ಳಲಾಗದಂತಹ ಸ್ಥಿತಿಗೆ ತಲುಪಿರುವುದು ವಿಚಿತ್ರ.
ರಸ್ತೆಗಳ ಕಣಗಳಲ್ಲಲಿ ಒಕ್ಕಣೆಯ ಕೆಲಸ ಮಾಡುವಾಗ ದೂಳು, ಕಸ ಕಡ್ಡಿಗಳು ತೂರಿ ಬಿಡುತ್ತಾರೆ, ಆ ದೂಳು ಸವಾರರ ಕಣ್ಣಿಗೆ ರಾಚಿದಾಗ, ಅವರ ವಾಹನ ಚಾಲನಾ ನಿಯಂತ್ರಣದ ಮೇಲೆ ಪರಿಣಾಮ ಬೀರಿ ಅನಾಹುತಗಳು ಸಂಭವಿಸುತ್ತವೆ. ರಸ್ತೆಯಲ್ಲಿ ಒಕ್ಕಣೆ ಮಾಡುವ ಕ್ರಿಯೆ ಮಂಡ್ಯ ಜಿಲ್ಲೆಯಲ್ಲಿ ಹೆಚ್ಚು ಎಂಬುದು ನನ್ನ ಭಾವನೆ, ಹಾಗಾಗಿ ಈ ಕಾರ್ಯಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು.