ಹುಕ್ಕೇರಿ: ಪಟ್ಟಣದ ಕೋರ್ಟ್ ಸರ್ಕಲ್ ಹಾಗೂ ಸಾರ್ವಜನಿಕ ಗ್ರಂಥಾಲಯದ ವರೆಗೆ ನಡೆಯುತ್ತಿರುವ ರಸ್ತೆ ವಿಸ್ತರಣೆ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವುದರಿಂದ ಪಾದಚಾರಿಗಳು ಹಾಗೂ ವಾಹನ ಸವಾರರು ಪರದಾಡುವಂತಾಗಿದೆ.
ಜಾಗತಿಕ ಬ್ಯಾಂಕ್ ರೂಪಾಯಿ 1 ಕೋಟಿ ಹಾಗೂ ರಾಜ್ಯ ಹಣಕಾಸು ನಿಗಮ ರೂಪಾಯಿ 80 ಲಕ್ಷ ಅನುದಾನದಿಂದ ಸುಮಾರು 1.8 ಕೋಟಿ ವೆಚ್ಚದ ಕಾಮಗಾರಿಗೆ ಸಂಸದ ರಮೇಶ್ ಕತ್ತಿ ಗುದ್ದಲಿ ಪೂಜೆ ನೆರವೇರಸಿ ನಿಗದಿತ ಸಮಯದಲ್ಲಿ ಕಾರ್ಯ ಮುಗಿಸುವಂತೆ ಸೂಚಿಸಿದ್ದರು.
ಕಾಮಗಾರಿ ಪ್ರಾರಂಭವಾಗಿ ಹಲವು ದಿನಗಳು ಗತಿಸಿದರು ಕಾರ್ಯ ಮುಗಿಯದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ತೆಗ್ಗು ತೆಗೆಯಲು ಹತ್ತಿಪ್ಪತ್ತು ದಿನ, ತಳಪಾಯಹ ಹಾಕಲು ಮತ್ತಷ್ಟು ದಿನ, ಗಟಾರ್ ನಿರ್ಮಿಸಿ ಸ್ಟೀಲ್ ತಂತಿ ಅಳವಡಿಸಿಲು ಹಾಗೂ ಅದಕ್ಕೆ ಕಾಂಕ್ರಿಟ್ ಹಾಕುವ ಕಾರ್ಯ ನಿಧಾನಗತಿಯಲ್ಲಿ ನಡೆಯುತ್ತಿದೆ.
ಎ.ಬಿ. ನಾಯಿಕ ವಕೀಲರ ಮನೆಯ ಮುಂದೆ ಸೇತುವೆಗೆಂದು ತೆಗ್ಗು ತೆಗೆದು ತಿಂಗಳು ಕಳೆದರೂ ಸೇತುವೆ ನಿರ್ಮಾಣ ಕಾರ್ಯ ಆರಂಭವಾಗಿಲ್ಲ. ಅದಕ್ಕೆ ಅಂಟಿಕೊಂಡು ಬಸವ ನಗರಕ್ಕೆ ಹಾದು ಹೋಗುವ ಜನರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
`ಕಾಮಗಾರಿ ಪ್ರಾರಂಭವಾಗಿ ಹಲವು ದಿನಗಳೇ ಕಳೆದಿವೆ. ಕೈಗೊಂಡ ಕಾಮಗಾರಿ ಪ್ರಗತಿ ನಿಧಾನಗತಿಯಲ್ಲಿ ನಡೆದಿದೆ. ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೆ ಕೆಲವೇ ದಿನಗಳಲ್ಲಿ ಮುಗಿಸುತ್ತೇವೆ ಎಂದು ಸುಳ್ಳು ಭರವಸೆ ನೀಡುತ್ತಿದ್ದಾರೆ. ಇದರಿಂದ ಮಕ್ಕಳು ಶಾಲೆಗೆ ಹೋಗುವುದಕ್ಕೆ, ಆಟವಾಡುವಾಗ ಈ ತೆಗ್ಗುಗಳು ಅಪಾಯಕಾರಿಯಾಗಿವೆ~ ಎನ್ನುತ್ತಾರೆ ಇಲ್ಲಿನ ನಿವಾಸಿಗಳಾದ ಶಿವಾನಂದ ಹಿರೇಮಠ, ನಫೀಜ್ ನದಾಫ್, ನಜೀರ್ ರವಿ ಬಸ್ತವಾಡ, ಬಸವರಾಜ ಕೊಂಡಿ ಅವರು.
`ಇಲ್ಲಿ ತೆಗೆದ ತೆಗ್ಗುಗಗಳಲ್ಲಿ ಮಳೆ ನೀರು ನಿಂತು ಸೊಳ್ಳೆಗಳು ಜಾಸ್ತಿ ಆಗಿವೆ. ಇದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆಗಳಿವೆ. ಅಲ್ಲದೇ ವಾಹನ ಸಂಚಾರಕ್ಕೂ ತೊಂದರೆಯಾಗಿದೆ~ ಎನ್ನುತ್ತಾರೆ ನಾನಪ್ಪ ಕುಂಬಾರ, ಬಸವರಾಜ ಬೆಳವಿ.
`ರಸ್ತೆ ಅಗಲೀಕರಣ ಕಾಮಗಾರಿಯನ್ನು ಕೈಗೆತ್ತಿಕೊಂಡ ಗುತ್ತಿಗೆದಾರರು ಸರಿಯಾಗಿ ಸ್ಪಂದಿಸುತ್ತಿಲ್ಲ. ಅನೇಕ ಬಾರಿ ಸೂಚಿಸಿದರು ಸುಳ್ಳು ನೆಪ ಹೇಳಿ ಜಾರಿಕೊಳ್ಳುತ್ತಿದ್ದಾರೆ. ಇದು ಹೀಗೆ ಮುಂದುವರೆದರೆ ಗುತ್ತಿಗೆದಾರನ್ನು ಬದಲಾವಣೆ ಮಾಡಿ ಕೆಲವೇ ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಜರಗಿಸುತ್ತೇನೆ~ ಎಂದು ಎಂಜಿನಿಯರ್ ಕುಲಗೋಡ `ಪ್ರಜಾವಾಣಿ~ ತಿಳಿಸಿದರು.
ಪಟ್ಟಣದ ಒಳಗಿನ ರಸ್ತೆ ಇಕ್ಕಟ್ಟಾಗಿರುವದರಿಂದ ಸರಳ ಸಂಚಾರಕ್ಕೆ ಈ ಯೋಜನೆ ರೂಪಿಸಲಾಗಿದ್ದು, ಅನುಷ್ಠಾನ ಮಾಡುವ ಕಾರ್ಯವೈಖರಿ ಜನರಿಗೆ ಬೇಸರ ತಂದಿದೆ. ಈ ಮಾರ್ಗದಲ್ಲಿ ದೊಡ್ಡ ವಾಹನಗಳು ಬಂದರೆ ಅವು ಹಾಯ್ದು ಹೋಗುವವರೆಗೆ ದ್ವಿಚಕ್ರ ಸವಾರರು, ಪಾದಚಾರಿಗಳು ಸ್ವಲ್ಪ ಹೊತ್ತು ಕಾಯಲೇ ಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.