ಬೆಂಗಳೂರು: ಮುಧೋಳ- ನಿಪ್ಪಾಣಿ ನಡುವಿನ 108 ಕಿ.ಮೀ ರಾಜ್ಯ ಹೆದ್ದಾರಿ ತೀವ್ರ ಹದಗೆಟ್ಟಿದ್ದು, ದುರಸ್ತಿಗೆ ಒತ್ತಾಯಿಸಿ ಕಾಂಗ್ರೆಸ್ನ ಪ್ರಕಾಶ್ ಹುಕ್ಕೇರಿ ವಿಧಾನಸಭೆಯಲ್ಲಿ ಶುಕ್ರವಾರ ಧರಣಿ ನಡೆಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಈ ರಸ್ತೆ ಅಭಿವೃದ್ಧಿ ಕುರಿತು ವಿಷಯ ಪ್ರಸ್ತಾಪಿಸಿದರು. ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ ಇದಕ್ಕೆ ಉತ್ತರ ನೀಡಿ, ಎಡಿಬಿ ಅಥವಾ ವಿಶ್ವಬ್ಯಾಂಕ್ ನೆರವಿನೊಂದಿಗೆ ಈ ಯೋಜನೆಕೈಗೆತ್ತಿಕೊಳ್ಳಲಾಗುವುದು. ಡಿಸೆಂಬರ್ಗೆ ಕಾಮಗಾರಿ ಆರಂಭವಾಗಲಿದೆ ಎಂದರು.
`ಈಗಲೇ ಓಡಾಡಲು ಸಾಧ್ಯ ಇಲ್ಲದ ರಸ್ತೆಯಲ್ಲಿ ಡಿಸೆಂಬರ್ವರೆಗೆ ಹೇಗೆ ಓಡಾಡುವುದು? ಸಚಿವರ ಉತ್ತರ ಸರಿ ಇಲ್ಲ~ ಎಂದು ಅವರು ಆಕ್ಷೇಪಿಸಿದರು. ನಂತರ ಸ್ಪೀಕರ್ ಪೀಠದ ಮುಂದೆ ತೆರಳಿ ಧರಣಿ ನಡೆಸಿದರು.
ದುರಸ್ತಿ ಮಾಡುವ ಆಶ್ವಾಸನೆ ನೀಡುವವರೆಗೂ ಧರಣಿ ಕೈಬಿಡುವುದಿಲ್ಲ ಎಂದರು. ಆಗ ಉದಾಸಿ `ತಕ್ಷಣಕ್ಕೆ ಗುಂಡಿ ಮುಚ್ಚುವ ಕೆಲಸ ಮಾಡಲಾಗುವುದು~ ಎಂದು ಹೇಳಿದರು. ಹುಕ್ಕೇರಿ ಧರಣಿ ಕೈಬಿಟ್ಟರು.
ರೈತರಿಗೆ ಸಿಗದ ಪವರ್ ಟಿಲ್ಲರ್: ಪವರ್ ಟಿಲ್ಲರ್ ಮತ್ತು ಇತರ ಕೃಷಿ ಯಂತ್ರೋಪಕರಣಗಳಿಗೆ ಸಂಬಂಧಿಸಿದಂತೆ ಸಹಾಯಧನ ನೀಡುವುದು ಬಾಕಿ ಇದ್ದು, ಮಾರ್ಚ್ ಒಳಗೆ ಎಲ್ಲವನ್ನೂ ಬಿಡುಗಡೆ ಮಾಡಲಾಗುವುದು ಎಂದು ಕೃಷಿ ಸಚಿವ ಉಮೇಶ ಕತ್ತಿ ವಿಧಾನಸಭೆಗೆ ತಿಳಿಸಿದರು. ಜೆಡಿಎಸ್ನ ವೆಂಕಟರಾವ್ ನಾಡಗೌಡರ ಪ್ರಶ್ನೆಗೆ ಉತ್ತರಿಸಿದರು.