ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯದಲ್ಲಿ ಕುರುಬರಿಗೆ ಅವಕಾಶ: ಭರವಸೆ

Last Updated 11 ಅಕ್ಟೋಬರ್ 2011, 8:35 IST
ಅಕ್ಷರ ಗಾತ್ರ

ಗೋಕಾಕ: ಕುರುಬರಿಗೂ ಜಿಲ್ಲೆಯಲ್ಲಿ ರಾಜಕೀಯವಾಗಿ ಬೆಳೆಯಲು ಅವಕಾಶ ಒದಗಿಸಿಕೊಡಿ ಎಂದು ಬೆಳಗಾವಿ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಡಾ. ರಾಜೇಂದ್ರ ಸಣ್ಣಕ್ಕಿ ಬಿಜೆಪಿ ಸಚಿವದ್ವಯರನ್ನು ಕೋರಿದರು.

ಸೋಮವಾರ ಇಲ್ಲಿಯ ಬೀರೇಶ್ವರ ಸಮುದಾಯ ಭವನದಲ್ಲಿ ಬೀರೇಶ್ವರ ವಿವಿಧ ಉದ್ದೇಶಗಳ ಅಭಿವೃದ್ಧಿ ಟ್ರಸ್ಟ್ ಆಯೋಜಿಸಿದ್ದ ಕಾಗಿನೆಲೆ ಕನಕ ಗುರುಪೀಠದ ಶಾಖಾಮಠ ನಿರ್ಮಾಣಕ್ಕೆ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯಕ್ಕೆ ಭೂಮಿ ಪೂಜೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಇಡೀ ಜಿಲ್ಲೆಯಲ್ಲಿಯೇ ಕುರುಬ ಸಮುದಾಯದವರ ಸಂಖ್ಯೆ 2ನೇ ಸ್ಥಾನದಲ್ಲಿದ್ದರೂ ಜಿಲ್ಲೆಗೊಬ್ಬ ಶಾಸಕರೂ ಇಲ್ಲದಿರುವುದು ಸಮಾಜ ಬಾಂಧವರಿಗೆ ನೋವನ್ನುಂಟು ಮಾಡಿದೆ ಎಂದು ವಿಷಾದಿಸಿದರು.

ಗುರುಪೀಠದ ಶಾಖಾಮಠದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಪೌರಾಡಳಿತ ಖಾತೆ ಸಚಿವ ಬಾಲಚಂದ್ರ ಜಾರಕಿಹೊಳಿ, `ಕುರುಬ ಸಮಾಜ ಬಾಂಧವರಿಗೆ ಸಾಮಾಜಿಕ ಮತ್ತು ರಾಜಕೀಯವಾಗಿ ಹಿಂದುಳಿದ ಭಾವನೆ ಬೇಡ. ಅವರಿಗೆ ಅಗತ್ಯವಿರುವ ಎಲ್ಲ ಬಗೆಯ ಸವಲತ್ತುಗಳನ್ನು ಸರ್ಕಾರದಿಂದ ಒದಗಿಸುವ ಜವಾಬ್ದಾರಿ ನನ್ನದು~ ಹಾಗೂ ಇಡೀ ಜಾರಕಿಹೊಳಿ ಬಂಧುಗಳದ್ದಾಗಿದೆ ಎಂದರು.

ಕುರುಬ ಸಮಾಜದ ಸ್ವಾಧೀನದಲ್ಲಿರುವ 15 ಗುಂಟೆ ಜಾಗೆಯನ್ನು ಮುಂದಿನ ಎರಡು ತಿಂಗಳ ಅವಧಿಯಲ್ಲಿ ಅದೇ ಸಮಾಜಕ್ಕೆ ಸರ್ಕಾರದಿಂದ ಬರೆದು ಕೊಡುವುದಾಗಿ ವಾಗ್ದಾನ ನೀಡಿದರು. ಸಹಕಾರ ಸಚಿವ ಲಕ್ಷ್ಮಣ ಸವದಿ ಅಭಿವೃದ್ಧಿ ವಿಚಾರದಲ್ಲಿ ಜಾತಿ ರಾಜಕಾರಣ ಸಲ್ಲದು ಎಂದರು.

ಅಧ್ಯಕ್ಷತೆ ವಹಿಸಿದ್ದ ಕುರುಬರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸಿದ್ದಲಿಂಗಪ್ಪ ದಳವಾಯಿ, ಸಮಾಜ ಏಳ್ಗೆಗಾಗಿ ಸರ್ವ ಬಾಂಧವರೂ ಶಿಕ್ಷಣ ಪಡೆದು ಸುಶಿಕ್ಷಿತರಾಗಬೇಕು ಎಂದರು. ಸಂಸದ ಸುರೇಶ ಅಂಗಡಿ ಅವರು ಕುರುಬರ ಸಮುದಾಯ ಭವನ ನಿರ್ಮಾಣಕ್ಕೆ ಉದಾರ ದೇಣಿಗೆ ನೀಡುವ ವಾಗ್ದಾನ ನೀಡಿ ವರ್ಷವೇ ಗತಿಸಿದರೂ ಇದುವರೆಗೆ ಯಾವುದೇ ಧನ ಸಹಾಯ ದೊರೆತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಮಲ್ಲಾಪೂರ ಪಿಜಿ ಗ್ರಾ.ಪಂ. ಅಧ್ಯಕ್ಷ ಡಿ.ಎಂ.ದಳವಾಯಿ, ತಾ.ಪಂ. ಸದಸ್ಯ ಲಕ್ಷ್ಮಣ ಮಸಗುಪ್ಪಿ, ಮಡ್ಡೆಪ್ಪ ತೋಳಿನವರ, ಎಪಿಎಮ್‌ಸಿ ಚೇರಮನ್ ಸಿದ್ಧಲಿಂಗಪ್ಪ ಕಂಬಳಿ, ಸಂಜೀವ ಬಾಣೆ ಮತ್ತಿತರರು ಉಪಸ್ಥಿತರಿದ್ದರು. ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಶಿಕ್ಷಕ ಎ.ಜೆ.ಕೋಳಿ ಮತ್ತು ಅವ್ವಣ್ಣಾ ಮೂಡಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT