ಯಳಂದೂರು: ಜಿಲ್ಲೆಯ ಜಾತ್ರೆಗಳ ಸುಗ್ಗಿಗೆ ಮುನ್ನುಡಿ ರಂಗಪ್ಪಸ್ವಾಮಿಯ ಚಿಕ್ಕಜಾತ್ರೆ. ಈ ಭಾರಿ ಜ.16 ಭಾನುವಾರ ನಡೆಯಲಿದೆ. ರಾಜ್ಯದ ಎಲ್ಲೆಡೆಯಿಂದ ಭಕ್ತಸಮೂಹ ಹರಿದು ಬರುತ್ತದೆ. ದ್ರಾವಿಡ ಶೈಲಿಯ ರಂಗನಾಥನ ಆಲಯಕ್ಕೆ ನವೀನ ರೂಪು ನೀಡಲು 2007ರಲ್ಲಿ ಆರಂಭಿಸಿದ ಅಭಿವೃದ್ಧಿ ಯೋಜನೆ ಮಾತ್ರ ವೇಗ ಪಡೆದಿಲ್ಲ. ದೇಗುಲ ಪ್ರಾಂಗಣ ಆಕರ್ಷಣೆ ಕಳೆದುಕೊಂಡು ಬಣಗುಡುತ್ತಿದೆ. ಈ ನಡುವೆಯೇ ಚಿಕ್ಕಜಾತ್ರೆಗೆ ಸೋಮವಾರದಿಂದ ಬೆಟ್ಟದಲ್ಲಿ ಸಾಂಪ್ರದಾಯಿಕ ವಿಧಿ ವಿಧಾನಗಳು ಆರಂಭಗೊಳ್ಳತ್ತವೆ.
ದೇವಳ ಪ್ರಾಕಾರ, ನವರಂಗ, ಮುಖಮಂಟಪ ಪುರಾತನ ಮಾದರಿಯಲ್ಲಿವೆ. ಅಲ್ಲಲ್ಲಿ ಕಲ್ಲು ಸಡಿಲವಾಗಿದೆ. ಮೂಲದೇವರನ್ನು ವಸಿಷ್ಠ ಮಹರ್ಷಿಗಳು ಸ್ಥಾಪಿಸಿದ್ದಾರೆ. ನಮ್ಮಾಳ್ವರ್, ರಾಮನುಜ, ವೇದಾಂತಚಾರ್ಯರ ವಿಗ್ರಹಗಳು ಇವೆ. ಕನಕದಾಸ ಗುಹೆ, ತುಳಸಮ್ಮನ ಗುಡಿಗಳು ಇವೆ. ಹದಿನಾಡಿನ ಮುದ್ದುರಾಜ 1667ರಲ್ಲಿ ಹಾಗೂ ದಿವಾನ್ ಪೂರ್ಣಯ್ಯ 2 ಗ್ರಾಮಗಳನ್ನು ನಿರ್ವಹಣೆಗೆ ದತ್ತಿಬಿಟ್ಟ ಇತಿಹಾಸವಿದೆ.
ಹೊಸದಾಗಿ ರಾಜಗೋಪುರ, ನೆಲಹಾಸು, ಪಾಕ ಶಾಲೆ, ಪ್ರಸಾದ ನಿಲಯ, ಆಡಳಿತ ಕಚೇರಿ, ಗುಡಿ ಮುಂದಿನ ಕಾಂಪೌಂಡ್ ನಿರ್ಮಿಸುವುದಾಗಿತ್ತು. ರಥದ ಶೆಡ್ ಹಾಗೂ ’ಎಲ್’ಮಾದರಿ ಸುತ್ತುಗೋಡೆ ಬಹುತೇಕ ಪೂರ್ಣಗೊಂಡಿದೆ.
‘ಶಾಸಕನಾಗಿದ್ದಾಗ 2009ರಲ್ಲಿ ಸಮಗ್ರ ಅಭಿವೃದ್ಧಿ ಯೋಜನೆಗೆ ಚಾಲನೆ ನೀಡಿದೆ. ಭಕ್ತರಾದ ಬೆಂಗಳೂರಿನ ವೀರೇಂದ್ರಸಿಂಗ್ ರೂ.2 ಕೋಟಿ ದೇಣಿಗೆ ನೀಡಿದ್ದಾರೆ. ಸಂಸದನಾದ ನಂತರವೂ ಈ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿದ್ದೇನೆ. ಆದರೆ ಲೋಕೋಪಯೋಗಿ ಇಲಾಖೆ ವೇಗವಾಗಿ ಸ್ಪಂದಿಸುತ್ತಿಲ್ಲ. ಬರುವ ಭಕ್ತರು ತಂಗಲು ಇಲ್ಲಿನ ಹಳೇ ಜಹಗಿರ್ದಾರ್ ಬಂಗಲೆ ರೂ.30ಲಕ್ಷ ವೆಚ್ಚದಲ್ಲಿ ನವೀಕರಿಸುವ ಯೋಜನೆಗೆ ಪ್ರಾಚ್ಯವಸ್ತು ಇಲಾಖೆಯ ಅನುಮೋದನೆ ಸಿಕ್ಕಿದೆ’ ಎಂದು ಸಂಸದ ಆರ್. ಧ್ರವನಾರಾಯಣ್ ‘ಪ್ರಜಾವಾಣಿ’ಗೆ ತಿಳಿಸಿದರು.
ಅಭಯಾರಣ್ಯ ಮಾನ್ಯತೆ ಪಡೆದಿರುವುದರಿಂದ ಪ್ರವಾಸಿಗರ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. ಬೀದಿ ದೀಪಗಳು ಅಲ್ಲಲ್ಲಿ ಕೆಟ್ಟಿವೆ. ದೊಡ್ಡ ರಥದ ಬೀದಿ ಶುದ್ಧಗೊಳ್ಳಬೇಕು. ಪ್ಲಾಸ್ಟಿಕ್ ಮಾರಾಟ ನಿಷೇಧಿಸಬೇಕು. ಇಲ್ಲಿನ ಗ್ರಾಮಸ್ಥರಿಗೆ ನೀರಿನ ಸಮ ಸ್ಯೆಯೂ ಇದೆ.
ಈಗಾಗಿ ದೇವಾಲಯ ಆಕರ್ಷಣೆ ಕಳೆದು ಕೊಂಡಿದೆ ಎನ್ನುತ್ತಾರೆ ಸೋಲಿಗ ಬುಡಕಟ್ಟು ಜನರ ಜಿಲ್ಲಾ ಕಾರ್ಯದರ್ಶಿ ಸಿ.ಮಾದೇಗೌಡ.
‘ಬಿಳಿಗಿರಿರಂಗನನ್ನು ಭಾವನೆಂದು ಕರೆಯುವ ಸೋಲಿಗರು ಜಾತ್ರೆಯ ಸಂದರ್ಭದಲ್ಲಿ ಧಾರ್ಮಿಕ ಕಾರ್ಯದಲ್ಲಿ ತೊಡಗುತ್ತಾರೆ. ಕಾಮಗಾರಿಗೆ ನಾಲ್ಕು ವರ್ಷ ಕಳೆದಿದೆ.
ಭಕ್ತರೇ ಧನ ಸಹಾಯ ನೀಡಿದ್ದರೂ ಹೇಳಿಕೊಳ್ಳುವ ಕೆಲಸವಾಗಿಲ್ಲ’. ಈ ಬಗ್ಗೆ ಮೇಲಾಧಿಕಾರಿಗಳ ಗಮನ ಸೆಳೆದು ಅಭಿವೃದ್ಧಿ ಪಡಿಸುವುದಾಗಿ ಜಿಪಂ. ನೂತನ ಸದಸ್ಯೆ ಕೇತಮ್ಮ ತಿಳಿಸಿದರು.
ಚರಿತ್ರೆ: ಪರುಶುರಾಮನ ಮೋಕ್ಷಕ್ಷೇತ್ರ. ದಕ್ಷಣ ಭಾರತದ ಚಿಕ್ಕ ತಿರುಪತಿ ಎಂದು ಕರೆಯಲಾಗಿದೆ. ಗಂಗನಾಡಿನ ದೊರೆಗಳು ಕುಂಚು ಕೋಟೆ ನಿರ್ಮಿಸಿದ್ದ ಬಗ್ಗೆ ಕುರುಹುಗಳಿವೆ. ಜೀವ ವೈವಿ ಧ್ಯತೆಗೂ ಹೆಸರಾದ ಸಸ್ಯ ಹಾಗೂ ಪ್ರಾಣಿ ಪ್ರಭೇದಗಳಿವೆ.
ಇತ್ತೀಚಿಗೆ ಹುಲಿ ಯೋಜನೆಗೆ ಕೇಂದ್ರ ಸರ್ಕಾರ ಇಲ್ಲಿನ ದಟ್ಟಕಾನನವನ್ನು ಆಯ್ಕೆ ಮಾಡಿದೆ. ಕರ್ನಾಟಕದಲ್ಲಿ ರಾಷ್ಟ್ರೀಯ ಮಾನ್ಯತೆ ಪಡೆದಿರುವ ಬಿಳಿಗಿರಿ ಬೆಟ್ಟ ಸಂಶೋಧಕರ ಸ್ವರ್ಗವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.