ಲಖನೌ: ಉತ್ತರಪ್ರದೇಶದ ಸಾರಿಗೆ ಇಲಾಖೆ ತಪಾಸಣಾ ಅಧಿಕಾರಿಗಳು ಆಗ್ರಾದಲ್ಲಿ ಕರ್ನಾಟಕದ ಲಾರಿ ಚಾಲಕನೊಬ್ಬನನ್ನು ಲಂಚ ನೀಡದ ಕಾರಣಕ್ಕಾಗಿ ಹೊಡೆದು ಕೊಂದಿರುವ ದುರಂತ ಬುಧವಾರ ನಡೆದಿದೆ.
ದೆಹಲಿಯಿಂದ ಆಂಧ್ರಪ್ರದೇಶಕ್ಕೆ ಅಕ್ಕಿ ಸಾಗಿಸುತ್ತಿದ್ದ ಲಾರಿಯ ಚಾಲಕ ಕೃಷ್ಣನನ್ನು ಸಾರಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ರೂ 4,000 ಲಂಚ ಕೇಳ್ದ್ದಿದಾರೆ. ಆಗ ಆತ ತನ್ನ ಬಳಿ ಅಗತ್ಯ ದಾಖಲಾತಿ ಇರುವುದಾಗಿ ಮತ್ತು ವಾಹನ ಪೂರ್ಣ ಲೋಡ್ ಆಗಿಲ್ಲವೆಂದು ತಿಳಿಸಿದ್ದಾನೆ. ಹೀಗಾಗಿ ಹಣ ನೀಡಲು ನಿರಾಕರಿಸಿದ್ದರಿಂದ ಸಿಟ್ಟಾದ ಅವರು ತಮ್ಮ ಬೂಟು ಕಾಲುಗಳಿಂದ ಆತನಿಗೆ ಒದೆದು, ಹಲ್ಲೆ ನಡೆಸಿದ್ದಾರೆ.
ಕೃಷ್ಣನಿಗೆ ಕೈಕಾಲು ಮತ್ತು ಎದೆನೋವು ಉಂಟಾಗಿ, ಲಾರಿ ಚಾಲನೆ ಮಾಡಲಾಗದ ಕಾರಣ ಸಹಾಯಕ ಸತ್ಯನಾರಾಯಣನಿಗೆ ವಾಹನವನ್ನು ನೀಡಿದ್ದಾನೆ. ನಂತರ ವೈದ್ಯರ ಬಳಿಗೆ ಹೋಗುವ ಮುನ್ನವೇ ಕೃಷ್ಣ ಕೊನೆಯುಸಿರೆಳೆದಿದ್ದಾನೆ. ಇದರಿಂದ ಗಾಬರಿಗೊಂಡ ಸಹಾಯಕ ಲಾರಿ ಮಾಲೀಕರಿಗೆ ಸುದ್ದಿ ಮಟ್ಟಿಸಿ, ಹಲವು ಸಾರಿಗೆ ಏಜೆಂಟ್ಗಳ ಕಚೇರಿ ಸ್ಥಳಕ್ಕೆ ಲಾರಿ ಕೊಂಡೊಯ್ದು ವಿಷಯ ತಿಳಿಸಿದ್ದಾನೆ.
ಘಟನೆ ಅರಿತ ಸಾರಿಗೆ ಏಜೆಂಟ್ಗಳು ಮತ್ತು ಇತರ ಲಾರಿಗಳ ಚಾಲಕರು ತಪ್ಪಿತಸ್ಥ ಸಾರಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಆಗ್ರಾದಲ್ಲಿ ರಸ್ತೆ ತಡೆ ಮಾಡಿ ಸಂಚಾರಕ್ಕೆ ಅಡ್ಡಿಪಡಿಸಿದರು. ಸ್ಥಳಕ್ಕೆ ಧಾವಿಸಿದ ಹಿರಿಯ ಅಧಿಕಾರಿಗಳು ಸೂಕ್ತ ತನಿಖೆ ಮತ್ತು ಕ್ರಮದ ಭರವಸೆ ನೀಡಿ, ಸಂಚಾರ ತೆರವುಗೊಳಿಸಿದರು. ಹತ್ಯೆಗೀಡಾಗಿರುವ ಚಾಲಕ ರಾಜ್ಯದ ಯಾವ ಭಾಗದವನೆಂದು ಈವರೆವಿಗೂ ತಿಳಿದು ಬಂದಿಲ್ಲ.