ಮಂಡ್ಯ: `ಕಾವೇರಿ' ನೀರಿನ ವಿಷಯ ದಲ್ಲಿ ರೈತರಿಗೆ ಅನ್ಯಾಯವಾದರೂ ಕಾಂಗ್ರೆಸ್ಸಿಗರು ಜನರ ಹಿತ ಕಾಯಲಿಲ್ಲ. ರಾಜ್ಯಕ್ಕೆ ಸುಭದ್ರ ಆಡಳಿತ ನೀಡುವುದಿರಲಿ, ಜನರ ಹಿತಕಾಯು ವುದಕ್ಕೆ ಅವರಿಂದ ಸಾಧ್ಯವಿಲ್ಲ' ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಟೀಕಿಸಿದರು.
ನಗರದಲ್ಲಿ ಸೋಮವಾರ ಜರುಗಿದ ಜೆಡಿಎಸ್ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿ, `ನೀರಿನ ವಿಷಯದಲ್ಲಿ ರಸ್ತೆಗಿಳಿದು ಪ್ರತಿಭಟನೆ ಮಾಡಿದರೆ ಸಾಲದು. ಈಗ ತೆಗೆದುಕೊಳ್ಳುವ ತೀರ್ಮಾನವೇ ಪ್ರಮುಖವಾಗಲಿದೆ' ಎಂದು ತಿಳಿಸಿದರು.
ಹನ್ನೊಂದು ತಿಂಗಳು ಆಡಳಿತ ನಡೆಸಿದಂತಹ ದೇವೇಗೌಡ ಅವರನ್ನು ಪ್ರಧಾನಿಯಾಗಿದ್ದಾಗ, `ಕಾವೇರಿ' ಸಮಸ್ಯೆ ಬಗೆಹರಿಸಲಿಲ್ಲ ಎಂದು ಪ್ರತಿಪಕ್ಷಗಳು ದೂರುತ್ತಿವೆ. ಹಾಗಿದ್ದರೆ, 50 ವರ್ಷಕ್ಕೂ ಹೆಚ್ಚು ಕಾಲ ಆಡಳಿತ ನಡೆಸಿದ ಕಾಂಗ್ರೆಸ್, 6 ವರ್ಷ ಆಡಳಿತ ನಡೆಸಿದ ಬಿಜೆಪಿ ಏಕೆ ಸಮಸ್ಯೆ ಬಗೆಹರಿಸಲು ಸಾಧ್ಯವಾಗಲಿಲ್ಲ' ಎಂದು ಪ್ರಶ್ನಿಸಿದರು.
`ನಾವು ಹಳ್ಳಿಯ ಸ್ಕೂಲಲ್ಲಿ ಓದಿದ್ದೇವೆ, ದಡ್ಡರಿದ್ದೇವೆ. ಆದರೆ ಅಶೋಕ್ ಜಯರಾಂ ವಿದೇಶದಲ್ಲಿ ಓದಿದವರು. ಬುದ್ಧಿವಂತರಿದ್ದಾರೆ. ಆದ್ದ ರಿಂದಲೇ ಅವರು, ಸೂಕ್ತ ನಿರ್ಧಾರ ವನ್ನು ಕೈಕೊಂಡು ಕಣದಲ್ಲಿದ್ದಾರೆ. ನಮ್ಮ ಮಾತನ್ನು ತಿರಸ್ಕರಿಸಿ ಹೋಗಿದ್ದಾರೆ. ಅವರ ಸ್ಪರ್ಧೆ ಹಿಂದೆ ಕೆಲವರ ಚಿತಾವಣೆಯೂ ಇದೆ. ಚುನಾವಣೆ ಮುಗಿದ ಬಳಿಕ ಅವರ ಅರಿವಿಗೆ ಬರಲಿದೆ' ಎಂದರು.
`ಪ್ರಧಾನಿ ದೇವೇಗೌಡ ಅವರೇ ಖುದ್ದು ಅಶೋಕ್ ಮತ್ತು ಕುಟುಂಬದ ಸದಸ್ಯರ ಜೊತೆಗೆ ಮಾತನಾಡಿ, ಈ ಬಾರಿ ಸ್ಪರ್ಧೆ ಬೇಡ. ಬಂಡಾಯವೂ ಬೇಡ ಸಾಕಷ್ಟು ಹೇಳಿದ್ದರೂ ತಿರಸ್ಕರಿಸಿ ಹೋದರು' ಎಂದು ಹೇಳಿದರು.
ಸಂಸದ ಎನ್.ಚಲುವರಾಯಸ್ವಾಮಿ ಮಾತನಾಡಿ, `ರಾಜ್ಯದಲ್ಲಿ ಜನತಾ ದಳ ಸರ್ಕಾರವಿದ್ದಾಗ ಜಿಲ್ಲೆಯಲ್ಲಿ ಅನೇಕ ಅಭಿವೃದ್ಧಿ ಕೆಲಸಗಳಾಗಿವೆ. ಪ್ರತಿಪಕ್ಷ ಗಳು ಅಧಿಕಾರಿ ನಡೆಸಿದಾಗ ಸಾಕಷ್ಟು ಅನ್ಯಾಯವಾಗಿದೆ' ಎಂದರು.
ಶಾಸಕರಾದ ಎಂ.ಶ್ರೀನಿವಾಸ್, ಎ.ಬಿ.ರಮೇಶ್ಬಾಬು ಬಂಡಿಸಿದ್ದೇ ಗೌಡ, ಬಿ.ರಾಮಕೃಷ್ಣ, ಜೆಡಿ(ಎಸ್) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾಖಾನ್, ಮಾಜಿ ಶಾಸಕರಾದ ಕೆ.ಟಿ.ಶ್ರೀಕಂಠೇಗೌಡ, ಜಿ.ಬಿ. ಶಿವಕುಮಾರ್, ಎಚ್.ಬಿ. ರಾಮು, ಜಿಲ್ಲಾ ಘಟಕ ಅಧ್ಯಕ್ಷ ಡಿ.ರಮೇಶ್, ಜಿಲ್ಲಾ ಯುವ ಘಟಕ ಅಧ್ಯಕ್ಷ ಶಶಿಧರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.