ಲಖನೌ (ಐಎಎನ್ಎಸ್): ಯುಪಿಎ ಅಧ್ಯಕ್ಷ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರು ನಡೆಸಿರುವ ಭ್ರಷ್ಟಾಚಾರದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುತ್ತಿರುವುದಾಗಿ ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣಿಯನ್ ಸ್ವಾಮಿ ಶನಿವಾರ ಹೇಳಿದ್ದಾರೆ.
`ಭ್ರಷ್ಟಾಚಾರದಲ್ಲಿ ವಾದ್ರಾ ಭಾಗಿದಾರಿಕೆಯ ಕುರಿತು ಮಾಹಿತಿ ಕಲೆ ಹಾಕುತ್ತಿದ್ದೇನೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿಯನ್ನು ನಾನು ಈಗ ಬಹಿರಂಗಪಡಿಸಲಾರೆ~ ಎಂದು ಲಖನೌದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಯಾವ ರೀತಿಯ ಹಗರಣದಲ್ಲಿ ವಾದ್ರಾ ಭಾಗಿಯಾಗಿದ್ದಾರೆ ಎಂಬ ಮಾಹಿತಿಯನ್ನು ಹಂಚಿಕೊಳ್ಳಲು ನಿರಾಕರಿಸಿರುವ ಸ್ವಾಮಿ, `ಭ್ರಷ್ಟರ ಮುಖವಾಡವನ್ನು ನಾನು ಬಯಲು ಮಾಡಲು ಯತ್ನಿಸಿದಾಗಲೆಲ್ಲಾ ನನ್ನ ಪ್ರಾಮಾಣಿಕತೆಯನ್ನು ಪಶ್ನೆ ಮಾಡಲಾಗುತ್ತದೆ~ ಎಂದರು.
`2ಜಿ ಹಗರಣದಲ್ಲಿ ಎ.ರಾಜಾ ಅವರ ಪಾತ್ರವನ್ನು ನಾನು ಬಹಿರಂಗ ಪಡಿಸಿದಾಗ ವಿರೋಧಿಗಳೆಲ್ಲಾ ನಾನು ದಲಿತ ವಿರೋಧಿ ಅಂದರು. ಅದೇ ಹಗರಣಕ್ಕೆ ಸಂಬಂಧಿಸಿದಂತೆ ಕನಿಮೊಳಿ ಬಂಧನವಾದಾಗ, ಆಕೆ ಮಹಿಳೆಯಾದ್ದರಿಂದ ಹಾಗೂ ನಾನು ಮಹಿಳೆಯರನ್ನು ವಿರೋಧಿಸುವುದರಿಂದ ಕನಿಮೊಳಿ ವಿರುದ್ಧ ಕೆಲಸ ಮಾಡುತ್ತಿದ್ದಾನೆ ಎಂದು ಹೇಳಿದರು. ಆ ಆರೋಪಗಳೆಲ್ಲಾ ಆಧಾರ ರಹಿತ. ನಾನು ಯಾವಾಗಲೂ ಸ್ವತಃ ದಾಖಲೆಗಳನ್ನು ಕಲೆ ಹಾಕಿ ಮಾಡಿರುವ ಆರೋಪಗಳನ್ನು ಸಮರ್ಥಸುವವನು~ ಎಂದು ವಿವರಿಸಿದರು.
`2 ಜಿ ಹಗರಣದಲ್ಲಿ ಪಿ ಚಿದಂಬರಂ ಅವರ ಪಾತ್ರವೂ ಇದೆ ಎಂಬುದಕ್ಕೆ ದಾಖಲೆಗಳಿವೆ. ಆದರೆ ಅವರನ್ನು ಈ ಪ್ರಕರಣದಲ್ಲಿ ಸಹ-ಆರೋಪಿಯನ್ನಾಗಿ ಪರಿಗಣಿಸಲಾಗಿಲ್ಲ. ಈ ಪ್ರಕರಣದಲ್ಲಿ ಅವರನ್ನೂ ಕೂಡ ಸಹ-ಆರೋಪಿಯನ್ನಾಗಿ ಮಾಡುವುದಕ್ಕೆ ನಾನು ಪ್ರಯತ್ನಿಸುವೆ~ ಎಂದು ಸ್ವಾಮಿ ಹೇಳಿದರು.
ಮುಂಬರುವ ಉತ್ತರ ಪ್ರದೇಶ ವಿಧಾನ ಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವು 50 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಮತ್ತು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲೂ ಪಕ್ಷ ಸಿದ್ಧವಿದೆ ಎಂದು ಅವರು ಹೇಳಿದ್ದಾರೆ.
`ಈ ವಿಚಾರವಾಗಿ ಇನ್ನು ಬಿಜೆಪಿಯು ನಿರ್ಧರಿಸಬೇಕು~ ಎಂದು ಸ್ವಾಮಿ ತಿಳಿಸಿದ್ದಾರೆ.