ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಕೊರತೆ ಅಪಾಯಕಾರಿ

Last Updated 15 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ರಾಷ್ಟ್ರೀಯ ಪ್ರಜ್ಞೆಯ ಕೊರತೆ ಬಹಳ ಅಪಾಯಕಾರಿ. ಇಂದಿನ ಹಲವು ಸಮಸ್ಯೆಗಳಿಗೆ ರಾಷ್ಟ್ರೀಯ ಪ್ರಜ್ಞೆ ಇಲ್ಲದಿರುವುದೇ ಕಾರಣ~ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ವಿಶ್ವ ಹಿಂದು ಪರಿಷತ್ ನಗರದ ಚಾಮರಾಜೀಟೆಯಲ್ಲಿರುವ ಕೇಶವಶಿಲ್ಪ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ `ಸದಾನಂದ~ (ವಿಶ್ವ ಹಿಂದು ಪರಿಷತ್‌ನ ಕೇಂದ್ರೀಯ ಕಾರ್ಯದರ್ಶಿಯಾಗಿದ್ದ ಸದಾನಂದ ಕಾಕಡೆ ಅವರ ಸ್ಮೃತಿ ಸಂಚಿಕೆ) ಸ್ಮರಣ ಸಂಚಿಕೆ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

`ಭಾರತೀಯ ಸಂಸ್ಕೃತಿ, ಮೌಲ್ಯಗಳ ಬಗ್ಗೆ ಬಹಳಷ್ಟು ಜನರಲ್ಲಿ ಸರಿಯಾದ ಅರಿವಿಲ್ಲ. ಪ್ರಾದೇಶಿಕ ಭಾವ, ಭಾಷಾವಾರು ಪ್ರಾಂತ್ಯಗಳ ರಚನೆಯ ಪ್ರಭಾವ ಹಾಗೂ ರಾಜಕೀಯ ಒತ್ತಡಗಳಿಂದ ರಾಷ್ಟ್ರೀಯ ಚಿಂತನೆ ನಡೆಯುತ್ತಿಲ್ಲ. ಇನ್ನಾದರೂ ರಾಷ್ಟ್ರೀಯ ಪ್ರಜ್ಞೆ ಬೆಳೆಸಿಕೊಳ್ಳಲು ಮುಂದಾಗಬೇಕು~ ಎಂದರು.

`ಸದಾನಂದ ಕಾಕಡೆ ಅವರು ರಾಷ್ಟ್ರೀಯ ಪ್ರಜ್ಞೆ ಮೂಡಿಸಲು ಪ್ರಯತ್ನಿಸುತ್ತಿದ್ದರು. ದೇಶದ ಏಕತೆ, ಹಿಂದೂ ಧರ್ಮದ ಅಖಂಡತೆ ಹೊರತುಪಡಿಸಿ ಬೇರೆ ಯಾವುದೇ ವಿಷಯಕ್ಕೂ ಅವರು ಗಮನ ನೀಡುತ್ತಿರಲಿಲ್ಲ. ಅವರಲ್ಲಿ ದೇಶ, ಧರ್ಮ, ಸಂಸ್ಕೃತಿ ಪ್ರೇಮ ಅಪಾರವಾಗಿತ್ತು. ಇದು ಯುವ ಜನತೆಗೆ ಮಾದರಿಯಾಗಿದೆ~ ಎಂದು ಹೇಳಿದರು.

`ಹಿಂದು ಧರ್ಮವನ್ನು ಉಳಿಸಿ, ಬೆಳೆಸುವುದು ಹಾಗೂ ಮುಂದಿನ ಪೀಳಿಗೆಯವರಿಗೆ ತಲುಪುವಂತೆ ಮಾಡುವ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅವರ ಕಾರ್ಯವೈಖರಿ ಹಾಗೂ ವಿಚಾರಗಳು ಸದಾ ನೆನಪಿಗೆ ಬರುತ್ತದೆ~ ಎಂದು ಸ್ಮರಿಸಿದರು.

ರಾಜ್ಯಸಭಾ ಸದಸ್ಯ ಎಂ. ರಾಮಾಜೋಯಿಸ್, `ಸಮಾಜ ಸೇವೆಗೆ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದವರನ್ನು ಸ್ಮರಿಸಿ, ಕೃತಜ್ಞತೆ ಸಲ್ಲಿಸುವುದು ಶ್ರೇಷ್ಠ ಕಾರ್ಯ. ವಿಶ್ವ ಹಿಂದು ಪರಿಷತ್‌ನ ಅಸಾಧಾರಣ ಸಂಘಟಕ ಸದಾನಂದ ಕಾಕಡೆ ಅವರ ಕುರಿತು ಸ್ಮರಣ ಸಂಚಿಕೆ ಹೊರತಂದಿರುವುದು ಉತ್ತಮವಾಗಿದೆ~ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

`ಸದಾನಂದ ಕಾಕಡೆ ಅವರು ಯಾವುದೇ ವಿಘ್ನಗಳು ಎದುರಾದರೂ ಎದೆಗುಂದುತ್ತಿರಲಿಲ್ಲ. ಧೈರ್ಯವಾಗಿ ಮುನ್ನಡೆದು ಅಂದುಕೊಂಡದ್ದನ್ನು ಸಾಧಿಸುತ್ತಿದ್ದರು. ಹಣಕಾಸು ವ್ಯವಹಾರಗಳನ್ನು ಸಮರ್ಪಕವಾಗಿ ನಡೆಸುತ್ತಿದ್ದ ಅವರ ಕಾರ್ಯವೈಖರಿ ಅನುಕರಣೀಯ~ ಎಂದರು.

ಸಂಚಿಕೆಯ ಗೌರವ ಸಂಪಾದಕ ಡಾ.ಎಂ. ಶಿವಕುಮಾರಸ್ವಾಮಿ, `ಸದಾನಂದ ಕಾಕಡೆ ಅವರ ಧ್ಯೇಯ ಕುರಿತು ಹಲವು ಲೇಖನಗಳು ಸಂಚಿಕೆಯಲ್ಲಿವೆ. ಅವರು ಪ್ರತಿ ಸಂದರ್ಭದಲ್ಲೂ ಹಿಂದು ಸಂಘಟನೆಯ ಪ್ರಗತಿಯನ್ನು ಗಮನಿಸುತ್ತಿದ್ದರು. ಹಿಂದು ಸಂಘಟನೆಯು ಸಮಾಜದ ಎಲ್ಲ ಶಕ್ತಿಯನ್ನು ಒಳಗೊಂಡಿರಬೇಕು ಎಂಬುದು ಅವರ ಆಶಯವಾಗಿತ್ತು~ ಎಂದು ಹೇಳಿದರು.  ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರ ಪ್ರಮುಖ ಚಂದ್ರಶೇಖರ ಭಂಡಾರಿ, ವಿಶ್ವ ಹಿಂದು ಪರಿಷತ್‌ನ ಕೇಂದ್ರೀಯ ಸಲಹಾ ಮಂಡಳಿ ಸದಸ್ಯ ಬಾಬುರಾವ್ ದೇಸಾಯಿ, ಕೇಂದ್ರೀಯ ಕೋಶಾಧ್ಯಕ್ಷ ರಾಘವ ರೆಡ್ಡಿ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT