ಕುಶಾಲನಗರ: ಕೊಡಗು ಬುಡಕಟ್ಟು ಕೃಷಿಕರ ಸಂಘ, ರಾಷ್ಟ್ರೀಯ ದಿವಾಸಿ ಆಂದೋಲನ, ಕಾರ್ಡ್, ಲೋಕಶಕ್ತಿ ಅಭಿಯಾನ ಸೇರಿದಂತೆ ದೇಶದ ವಿವಿಧ ಸಮುದಾಯ ಹಕ್ಕುಗಳ ಸಂಘಟನೆಗಳ ಸಹಯೋಗದಲ್ಲಿ ಪಟ್ಟಣದ ಆರ್.ಎಂ.ಸಿ. ಮೈದಾನದಲ್ಲಿ ಹಮ್ಮಿಕೊಂಡಿರುವ ರಾಷ್ಟ್ರೀಯ ಸಮುದಾಯ ಹಕ್ಕುಗಳ ಸಂಗಮ -2011 ಕ್ಕೆ ಅ.12ರಂದು ತೆರೆ ಬೀಳಲಿದೆ.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೆಳಿಗ್ಗೆ 10 ಗಂಟೆಗೆ ಬೃಹತ್ ಸಾಂಸ್ಕೃತಿಕ ಕಲಾ ಜಾಥಾ ಏರ್ಪಡಿಸಲಾಗಿದೆ.
ಸಂಗಮದಲ್ಲಿ 12 ಪ್ರಮುಖ ನಿರ್ಣಯಗಳನ್ನು ಅಂಗೀಕರಿಸಿ ಐತಿಹಾಸಿಕ `ಕುಶಾಲನಗರ ಘೋಷಣೆ~ ಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಕ್ಷಣ ಜಾರಿಗೊಳಿಸಬೇಕು ಎಂದು ಒತ್ತಾಯಿಸಲಾಗುವುದು ಎಂದು ಸಂಗಮದ ರಾಷ್ಟ್ರೀಯ ಸಂಚಾಲಕ ವಿ.ಎಸ್.ರಾಯ್ಡೇವಿಡ್ ಮಂಗಳವಾರ ನಡೆದ ಗುಂಪು ಚರ್ಚೆಯಲ್ಲಿ ತಿಳಿಸಿದರು.
ಕೇರಳದ ಕಣ್ಣೂರಿನ ಜಂಟಿ ಕ್ರಿಯಾ ವೇದಿಕೆ ಸಂಚಾಲಕಿ ಅಂಜುಸಿಂಗ್ ಮಾತನಾಡಿ,ಆದಿವಾಸಿ ಸಮುದಾಯದವರು ಎಚ್ಐವಿ ಸೋಂಕಿನಿಂದ ಬಳಲುತ್ತಿದ್ದಾರೆ ಎಂದು ಕೇಂದ್ರ ಸರ್ಕಾರ ಘೋಷಿಸಿ ಈ ಸಮುದಾಯಕ್ಕೆ ಅವಮಾನ ಮಾಡಿದೆ. ಈ ಘೋಷಣೆಯನ್ನು ಸರ್ಕಾರ ತಕ್ಷಣ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ದಕ್ಷಿಣ ಭಾರತದ ರೈತ ಚಳವಳಿ ಸಮಿತಿಯ ಸಂಯೋಜಕ ಎಸ್.ಕನೈಯನ್, ಇನ್ಫಾಫ್ ರಾಷ್ಟ್ರೀಯ ಕಾರ್ಯದರ್ಶಿ ವಿಲ್ಫ್ರೆಡ್ ಡಿ~ಕೋಸ್ಟ , ಹುಣಸೂರು `ಡೀಡ್~ ಸಂಸ್ಥೆಯ ನಿರ್ದೇಶಕ ಎಸ್.ಶ್ರೀಕಾಂತ್, ಜಿಲ್ಲಾ ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಜೆ.ಪಿ.ರಾಜು, ಮುಖಂಡರಾದ ಆರ್.ಕೆ.ಚಂದ್ರು, ಜೆ.ಕೆ.ರಾಮು, ಕುಡಿಯರ ಮುತ್ತಪ್ಪ, ವೆಂಕಟಸ್ವಾಮಿ, ಪಿ.ಎಸ್.ಮುತ್ತ ಸೇರಿದಂತೆ ವಿವಿಧ ರಾಜ್ಯದ ಆದಿವಾಸಿ ಪ್ರಮುಖರು ಇದ್ದರು.ಸಂಗಮದಲ್ಲಿ ಅನೇಕ ರಾಜ್ಯಗಳ ವಿವಿಧ ಸಮುದಾಯಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.