ಪಾವಗಡ: ಕೇಂದ್ರ ರೇಷ್ಮೆ ಮಂಡಳಿಯ ತಂತ್ರಜ್ಞಾನವನ್ನು ರೈತರಿಗೆ ಹಸ್ತಾಂತರ ಮಾಡುವ ಕ್ಲಸ್ಟರ್ ಯೋಜನೆ ಮೂಲಕ ವೈ.ಎನ್.ಹೊಸಕೋಟೆ ಕ್ಲಸ್ಟರ್ ದೇಶದಲ್ಲೇ ಅತ್ಯಧಿಕ ಹೆಚ್ಚು ಇಳುವರಿ ರೇಷ್ಮೆಗೂಡು ಬೆಳೆಯುವ ಸ್ಥಾನದಲ್ಲಿದೆ ಎಂದು ಮೈಸೂರಿನ ಪ್ರಾದೇಶಿಕ ರೇಷ್ಮೆ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಎಸ್.ಎಂ.ಎಚ್.ಖಾದ್ರಿ ತಿಳಿಸಿದರು.
ತಾಲ್ಲೂಕಿನ ಬಿ.ಹೊಸಹಳ್ಳಿ ಗ್ರಾಮದಲ್ಲಿ ಮಂಗಳವಾರ ರೇಷ್ಮೆ ಇಲಾಖೆ ಏರ್ಪಡಿಸಿದ್ದ ಜ್ಞಾನಾರ್ಜನಾ ಕಾರ್ಯಕ್ರಮದಲ್ಲಿ ಮಾತನಾಡಿ, ತಮಿಳುನಾಡು ಏಳು ವರ್ಷಗಳ ಸಾಧನೆಯಿಂದ ಶೇಕಡಾ 78ರಷ್ಟು ಇಳುವರಿ ಬೆಳೆದರೆ, ವೈ.ಎನ್.ಹೊಸಕೋಟೆ ಶೇ 78.18ರಷ್ಟು ಇಳುವರಿಯನ್ನು ನಾಲ್ಕು ವರ್ಷಗಳಿಂದ ಪಡೆದಿದೆ. ಇದು ರೈತರ ಮಹತ್ವದ ಸಾಧನೆ ಎಂದರು.
ರಾಜ್ಯದಲ್ಲಿ ಅತಿ ಹೆಚ್ಚು ಶೇಕಡಾ 78.18ರಷ್ಟು ಬೆಳೆದ ಪೊಲೇನಹಳ್ಳಿಯ ಚಂದ್ರಶೇಖರ ರೆಡ್ಡಿ ಸೇರಿದಂತೆ 20ಕ್ಕೂ ಹೆಚ್ಚು ರೈತರನ್ನು ಸಮಾರಂಭದಲ್ಲಿ ಅಭಿನಂದಿಸಲಾಯಿತು. ಕೇಂದ್ರ ರೇಷ್ಮೆ ಮಂಡಳಿ ಸದಸ್ಯ ನರಸಿಂಹಯ್ಯ, ರೇಷ್ಮೆ ಉಪ ನಿರ್ದೇಶಕ ಪುಟ್ಟಲಿಂಗಯ್ಯ ಮಾತನಾಡಿದರು.
ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ವಿಜ್ಞಾನಿಗಳಾದ ರೇಷ್ಮೆ ಇಲಾಖೆ ಜಂಟಿ ನಿರ್ದೇಶಕ ಬೋರಯ್ಯ, ಕೊಡತಿ ಪ್ರಾದೇಶಿಕ ರೇಷ್ಮೆ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ.ಜೈಶಂಕರ್, ಡಾ.ಸುಬ್ರಹ್ಮಣ್ಯಂ, ಡಾ.ಶಿವಶಂಕರ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ವಿನೋದಾ ರಾಮಾಂಜಿನರೆಡ್ಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾವತಿ, ಉಪಾಧ್ಯಕ್ಷ ವಿ.ಕೇಶವರೆಡ್ಡಿ, ಲಕ್ಷ್ಮೀದೇವಮ್ಮ ಭಾಗವಹಿಸಿದ್ದರು. ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಮುನ್ಚಿಬಸಯ್ಯ ನಿರೂಪಿಸಿದರು.