ಬೆಂಗಳೂರು: ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಲ್ಲಿದ್ದ ಕೆಲವು ರೈತರು ಚುನಾವಣೆಗೆ ಹೊರತಾದ ಪ್ರತ್ಯೇಕ ಸಂಘಟನೆ ಸ್ಥಾಪಿಸಿದ್ದಾರೆ.
ಹೊಸದಾಗಿ ಸ್ಥಾಪಿಸಿರುವ ಸಂಘಕ್ಕೆ ರಾಜ್ಯ ರೈತ ಸಂಘ (ಚುನಾವಣೆ ರಹಿತ) ಎಂದು ಹೆಸರು ಇಡಲಾಗಿದೆ. ಇದರ ಅಧ್ಯಕ್ಷರಾಗಿ ರೈತ ಮುಖಂಡ ಜಿ.ಎ.ಲಕ್ಷ್ಮೀನಾರಾಯಣಗೌಡ ಗಬ್ಬಾಡಿ ಅವರನ್ನು ನೇಮಕ ಮಾಡಲಾಗಿದೆ.
`ರೈತಪರ ಹೋರಾಟಕ್ಕೆ ರೈತ ಸಂಘ ಸ್ಥಾಪಿಸಿದ್ದು. ಆದರೆ, ಅದು ಇತ್ತೀಚೆಗೆ ಚುನಾವಣೆ ಕಡೆ ಹೆಚ್ಚು ಗಮನ ನೀಡುತ್ತಿದೆ. ಇದರಿಂದ ಮೂಲ ಉದ್ದೇಶಕ್ಕೆ ಪೆಟ್ಟು ಬಿದ್ದಂತಾಗಿದೆ' ಎಂದು ಗಬ್ಬಾಡಿ ದೂರಿದರು. ಹಾವೇರಿಯ ಶಿವಾನಂದಗುರುಮಠ ಸ್ವಾಮೀಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರತ್ಯೇಕ ಸಂಘ ಸ್ಥಾಪನೆ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದರು. ಚುನಾವಣೆಯ ಪ್ರಣಾಳಿಕೆಯಲ್ಲಿ ಯಾವ ಪಕ್ಷ ರೈತ ಪರ ಯೋಜನೆಗಳನ್ನು ರೂಪಿಸುತ್ತದೆಯೋ, ಅಂತಹ ಪಕ್ಷವನ್ನು ಮಾತ್ರ ಬೆಂಬಲಿಸುವುದಾಗಿ ಹೇಳಿದರು.
`ಪ್ರಜಾಪ್ರಗತಿ ರಂಗದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರು ರಾಜಕೀಯ ಚಟುವಟಿಕೆಗಳಿಗೆ ಹೆಚ್ಚು ಒತ್ತು ನೀಡುತ್ತಿರುವುದು ಬೇಸರ ತಂದಿದೆ' ಎಂದರು.