ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ಸಂಪರ್ಕ ಕೇಂದ್ರದ ‘ಖೋಟಾ ನೋಟು’ ಪುರಾಣ!

ಕೃಷಿ ಸಚಿವರ ಸಂವಾದ ಸಭೆಯಲ್ಲಿ ಗೋಳುತೋಡಿಕೊಂಡ ಅಧಿಕಾರಿಗಳು
Last Updated 14 ಸೆಪ್ಟೆಂಬರ್ 2013, 5:14 IST
ಅಕ್ಷರ ಗಾತ್ರ

ದಾವಣಗೆರೆ: ರಸಗೊಬ್ಬರ, ಬಿತ್ತನೆ ಬೀಜ ಖರೀದಿಗೆ ಬರುತ್ತಿರುವ ರೈತರಿಂದ ‘ಖೋಟಾ ನೋಟು’ ಚಲಾವಣೆಯಾಗುತ್ತಿದೆ. ಇದು ಕೃಷಿ ಅಧಿಕಾರಿಗಳಿಗೆ ತಲೆನೋವಾಗಿದೆ. ನಮಗೆ ಮೊದಲೇ ಸಿಬ್ಬಂದಿ ಕೊರತೆ ಇದೆ... ವಿತರಣೆಯ ಒತ್ತಡದಲ್ಲಿ ಖೋಟಾನೋಟು, ಅಸಲಿ ನೋಟು ಯಾವುದು ಎಂದು ಗೊತ್ತಾಗುವುದಿಲ್ಲ... ಸಮಸ್ಯೆ ಪರಿಹರಿಸಿ ಸರ್‌...’

ಜಲಾನಯನ ಇಲಾಖೆಗೆ ಈಚೆಗೆ ವರ್ಗಾವಣೆಗೊಂಡಿರುವ ಆನಗೋಡು ಹೋಬಳಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಶಾಂತಾಮಣಿ ಸಾಥ್‌ ನೀಡಿ, ‘ಆನಗೋಡು ಹೋಬಳಿಯಲ್ಲಿ ಖೋಟಾನೋಟು ಚಲಾವಣೆ ಹೆಚ್ಚುತ್ತಿದೆ. ಇದು ಕೃಷಿ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ ಸರ್...’ ಎಂದರು.

–ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಚಿತ್ರದುರ್ಗ–ದಾವಣಗೆರೆ ಅವಳಿ ಜಿಲ್ಲೆಗಳ ಕೃಷಿ ಪ್ರಗತಿ ಪರಿಶೀಲನಾ ಸಭೆ ಮತ್ತು ಅಧಿಕಾರಿಗಳ ಸಂವಾದ ಸಭೆಯಲ್ಲಿ ಕೃಷಿ ಅಧಿಕಾರಿಗಳು ಕೃಷಿ ಸಚಿವ ಕೃಷ್ಣ ಬೈರೇಗೌಡ ಅವರ ಮುಂದೆ ತೋಡಿಕೊಂಡ ಪರಿ ಇದು.

ಮನವಿಗೆ ಪ್ರತಿಕ್ರಿಯಿಸಿದ ಸಚಿವರು, ‘ಇದು ಗಂಭೀರ ಸಮಸ್ಯೆ. ಎಲ್ಲಿಂದ ಖೋಟಾನೋಟುಗಳು ಚಲಾವಣೆ ಯಾಗುತ್ತಿವೆ. ಅದು ರೈತರ ಕೈಗೆ ಹೇಗೆ ಬರುತ್ತಿವೆ ಎಂಬುದರ ಬಗ್ಗೆ ಸಮಗ್ರ ತನಿಖೆಯಾಗಬೇಕು. ಕೂಡಲೇ ಜಿಲ್ಲಾಡಳಿತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸುವ ಮೂಲಕ ಸಮಸ್ಯೆ ಪರಿಹರಿಸುವಂತೆ ಜಿಲ್ಲಾಧಿಕಾರಿ ಎಸ್.ಟಿ. ಅಂಜನ್‌ಕುಮಾರ್ ಅವರಿಗೆ ಸೂಚಿಸಿದರು.

‘ರೈತ ಸಂಪರ್ಕ ಕೇಂದ್ರಗಳಲ್ಲಿ ರಸಗೊಬ್ಬರ, ಬೀಜ ಮತ್ತು ಕೃಷಿ ಉಪಕರಣಗಳನ್ನು ಕಚೇರಿಯಲ್ಲಿಯೇ ದಾಸ್ತಾನು ಮಾಡಿಕೊಳ್ಳಬೇಕಾದ ಸ್ಥಿತಿಇದೆ. ಗ್ರಾಮೀಣ ಪ್ರದೇಶದಲ್ಲಿ ಪರ್ಯಾಯ ಕಟ್ಟಡದ ವ್ಯವಸ್ಥೆ ಇಲ್ಲ. ಇದರಿಂದಾಗಿ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಕೇಂದ್ರಗಳಿಗೆ ಒಂದು ಉಗ್ರಾಣದ ಅವಶ್ಯಕತೆ ಇದೆ’ ಎಂದು ಹಿರಿಯೂರಿನ ಕೃಷಿ ಅಧಿಕಾರಿ ಉಷಾರಾಣಿ ಸಚಿವರ ಗಮನ ಸೆಳೆದರು.

ಇದಕ್ಕೆ ಉತ್ತಾರಿಸಿದ ಸಚಿವರು, ‘ ಕೆಲವು ಕಡೆಗಳಲ್ಲಿ ರಾಜೀವ ಭವನ ಕಟ್ಟಡಗಳು ಇವೆ. ಅವುಗಳನ್ನು ಬಳಸಬಹುದು. ಉಗ್ರಾಣ ನಿರ್ಮಾಣಕ್ಕೆ ಬೊಕ್ಕಸದಲ್ಲಿ ಹಣವಿದೆ. ಆದರೆ, ನಿವೇಶನಗಳ ಕೊರತೆಯಿಂದಾಗಿ ಹಿನ್ನಡೆಯಾಗಿದೆ. ನಿವೇಶನಗಳಿದ್ದವರು ಇಲಾಖೆಯ ಉನ್ನತಾಧಿಕಾರಿಗಳ ಗಮನಕ್ಕೆ ತಂದು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದರೆ ಅನುದಾನ ಮಂಜೂರು ಮಾಡಿಸುತ್ತೇನೆ’ ಎಂದರು.

ಸಂವಾದ ಸಭೆಯ ನಂತರ ಅಧಿಕಾರಿಗಳ ಸಭೆ ಉದ್ದೇಶಿಸಿ ಸಚಿವ ಕೃಷ್ಣ ಬೈರೇಗೌಡ ಮಾನಾಡಿದರು. ಟ್ರ್ಯಾಕ್ಟರ್‌ ಸಬ್ಸಿಡಿ ಯೋಜನೆಗೆ ಚಾಲನೆ ಪ್ರಸಕ್ತ ಸಾಲಿನಲ್ಲಿ ರಾಜ್ಯ ಸರ್ಕಾ 16–25ಎಚ್ ಬಿ ಟ್ರ್ಯಾಕ್ಟರ್‌ ಸಹಾಯಧನ ಯೋಜನೆ ಆರಂಭಿಸುತ್ತಿದೆ ಎಂದು ಕೃಷಿ ಸಚಿವ ಕೃಷ್ಣಬೈರೇಗೌಡ ಪ್ರಕಟಿಸಿದರು.

ನಮ್ಮ ರೈತರು ಕೃಷಿ ಉಪಕರಣಗಳನ್ನು ಖರೀದಿಸುವಲ್ಲಿ ಹಿಂದೇಟು ಹಾಕುತ್ತಿರುವ ಕಾರಣ ಏನು? ಸಹಾಯಧನ ನೀಡಿದರೂ ನಿರೀಕ್ಷಿತಮಟ್ಟದ ಗುರಿ ಸಾಧನೆ ಸಾಧ್ಯವಾಗುತ್ತಿಲ್ಲ ಏಕೆ? ಎಂದು ಅವಳಿ ಜಿಲ್ಲೆಗಳ ಕೃಷಿ ಅಧಿಕಾರಿಗಳನ್ನು ಪ್ರಶ್ನಿಸಿದರು.

ಕೃಷಿ ಕಾರ್ಮಿಕರ ಕೊರತೆಯಿಂದಾಗಿ ಸಕಾಲದಲ್ಲಿ ಬಿತ್ತನೆ ಕಾರ್ಯಾಕ್ಕೆ ಹಿನ್ನಡೆಯಾಗುತ್ತಿದೆ. ಇದಿರಂದ ಬಿತ್ತನೆ ಗುರಿ ಸಾಧನೆ ಸಾಧ್ಯವಾಗುತ್ತಿಲ್ಲ. ಕೂರಿಗೆಯಂತಹ ಉಪಕರಣದಿಂದ 1ಗಂಟೆಯಲ್ಲಿ 1ಹೆಕ್ಟೇರ್‌ ಪ್ರದೇಶ ಬಿತ್ತನೆ ನಡೆಸಬಹುದು. ಹಾಗಾಗಿ, ಕೂರಿಗೆಯಂತಹ ಉಪಕರಣಗಳನ್ನು ಸಹಾಯಧನದಲ್ಲಿ ಸರ್ಕಾರ ಮಾರಾಟ ಮಾಡುತ್ತಿದ್ದರೂ, ಖರೀದಿಗೆ ರೈತರು ಉತ್ಸಾಹ ತೋರಿಸಿಲ್ಲ. ಉಪಕರಣಗಳಿಗಾಗಿ ಅರ್ಜಿ ಸಲ್ಲಿಸಿದ ರೈತರಿಗೆ ಸಕಾಲದಲ್ಲಿ ಉಪಕರಣಗಳು ಸಿಕ್ಕಲ್ಲ ಎಂಬ ದೂರುಗಳು ಸಹ ಕೇಳಿ ಬಂದಿವೆ. ಹಾಗಾಗದಂತೆ ಕೃಷಿ ಅಧಿಕಾರಿಗಳು ಶ್ರಮಿಸಬೇಕು ಎಂದು ಸಲಹೆ ನೀಡಿದರು.

3 ಸಾವಿರ ಹುದ್ದೆ ಖಾಲಿ
ರಾಜ್ಯದಲ್ಲಿನ ಕೃಷಿ ಇಲಾಖೆಯಲ್ಲಿ 3 ಸಾವಿರ ಹುದ್ದೆಗಳು ಖಾಲಿ ಇವೆ. ಸದ್ಯ 9,500 ಅನುವುಗಾರರನ್ನು ಒಪ್ಪಂದದ ಮೇಲೆ ನೇಮಕ ಮಾಡಿಕೊಂಡು ಕಾರ್ಭಾರ ನಿಭಾಯಿಸಲು ನಿರ್ಧರಿಸಲಾಗಿದೆ. ಸಾಯವಯ ಕೃಷಿಗೆ ಉತ್ತೇಜನ ನೀಡಲು 500 ಹೆಕ್ಟೇರ್‌ ಪ್ರದೇಶದಲ್ಲಿ ರೂ 55 ಕೋಟಿ ವೆಚ್ಚದಲ್ಲಿ ಸಾವಯವ ಪ್ರಾತ್ಯಾಕ್ಷಿಕೆ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಶಾಮನೂರು ಶಿವಶಂಕರಪ್ಪ, ಶಾಸಕರಾದ ಎಚ್‌.ಪಿ.ರಾಜೇಶ್, ವಡ್ನಾಳ್‌ ರಾಜಣ್ಣ, ಡಿ.ಜಿ.ಶಾಂತನಗೌಡ, ಎಚ್.ಎಸ್‌. ಶಿವಶಂಕರ್, ಜಿಲ್ಲಾಧಿಕಾರಿ ಎಸ್‌.ಟಿ. ಅಂಜನ್‌ಕುಮಾರ್, ಜಿ.ಪಂ. ಸಿಇಒ ಎ.ಬಿ. ಹೇಮಚಂದ್ರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT