ಬೆಂಗಳೂರು : ಕೃಷಿ ಉತ್ಪನ್ನಗಳಿಗೆ ಸಿಗುವ ಅನಿಶ್ಚಿತ ಬೆಲೆಗಳಿಂದ ತೊಂದರೆಗೊಳಗಾಗುವ ರೈತರ ನೆರವಿಗೆ ಮುಂದೆ ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೃಷಿ ಬೆಲೆ ಆಯೋಗದ ರಚನೆ ಹಾಗೂ ಕೃಷಿಕರಿಗೆ 2 ಲಕ್ಷದವರೆಗಿನ ಸಾಲಕ್ಕೆ ಶೂನ್ಯ ಬಡ್ಡಿದರದ ಘೋಷಣೆ ಮಾಡಿದ್ದಾರೆ.
ಕೃಷಿ ಬೆಲೆ ಆಯೋಗವು ರೈತರು ಕೃಷಿ ತಜ್ಞರು ಮತ್ತು ಕೃಷಿ ಆರ್ಥಿಕ ತಜ್ಞರನ್ನು ಒಳಗೊಂಡಿರುತ್ತದೆ. ಆಯೋಗವು ವೈಜ್ಞಾನಿಕವಾಗಿ ಮಾಡುವ ಶಿಫಾರಸ್ಸುಗಳನ್ನು ಆಧರಿಸಿ ಸರ್ಕಾರವು ಸೂಕ್ತ ಬೆಲೆಗಳನ್ನು ನಿಗದಿಪಡಿಸುತ್ತದೆ.
ರೈತರು ಕನಿಷ್ಠ ಬೆಂಬಲ ಬೆಲೆಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಮುಂಚಿತವಾಗಿಯೇ ಬೆಲೆ ಮಧ್ಯಸ್ಥಿಕೆ ಹಾಗೂ ಬೆಂಬಲ ಬೆಲೆ ಕಾರ್ಯಾಚರಣೆಯನ್ನು ಕೈಗೊಳ್ಳಲಾಗುವುದು. ಈ ವರ್ಷ ಇದಕ್ಕಾಗಿ ಆವರ್ತನಿಧಿಯನ್ನು ಒಂದು ಸಾವಿರ ಕೋಟಿರೂಗೆ ಹೆಚ್ಚಿಸಲಾಗುವುದು.
ಬರ, ಪ್ರವಾಹ, ಕೀಟಬಾಧೆ ಇತ್ಯಾದಿ ನೈಸರ್ಗಿಕ ಪ್ರಕೋಪಗಳಿಂದಾಗುವ ನಷ್ಟದಿಂದ ರೈತರನ್ನು ರಕ್ಷಿಸಲು ವಿಪತ್ತು ಪರಿಹಾರ ನಿಧಿಯ ಗಾತ್ರ ಹೆಚ್ಚಿಸಲಾಗುವುದು ಜತೆಗೆ ಕಂದಾಯ ಇಲಾಖೆಯಲ್ಲಿ ವಿಕೋಪ ಉಪಶಮನ ಹಾಗೂ ಪ್ರತಿರೋಧಕ ಕಾರ್ಯಗಳಿಗಾಗಿ `ವಿಕೋಪ ಉಪಶಮನ ನಿಧಿ'ಯನ್ನು ಸ್ಥಾಪಿಸಲು ಬಜೆಟ್ನಲ್ಲಿ ಪ್ರಸ್ತಾಪಿಸಲಾಗಿದೆ.
ರೈತರ ಸಲುವಾಗಿ ಬಜೆಟ್ನಲ್ಲಿ ಪ್ರಸ್ತಾವಿತವಾಗಿರುವು ಇತರೆ ಕ್ರಮಗಳು ಹೀಗಿವೆ,
1. ಬರ ಮತ್ತು ನೆರೆ ಹಾವಳಿಗಳಿಂದ ಸಂಕಷ್ಟಕ್ಕೀಡಾದ ಕೃಷಿ ಕಾರ್ಮಿಕರ ಹಾಗೂ ರೈತರ ಮಕ್ಕಳ ಶಿಕ್ಷಣ ಶುಲ್ಕ ಭರಿಸಲು ಯೋಜನೆ
2. ರೈತರು ಸಹಕಾರ ಸಂಸ್ಥೆಗಳಿಂದ ಪಡೆಯುವ 2 ಲಕ್ಷ ರೂಗಳವರೆಗಿನ ಸಾಲಕ್ಕೆ ಶೂನ್ಯ ಬಡ್ಡಿ ಹಾಗೂ 2 ಲಕ್ಷ ರೂಗಳಿಂದ 3ಲಕ್ಷ ರೂಗಳವರೆಗಿನ ಸಾಲಕ್ಕೆ ಶೇ. 1ರಷ್ಟು ಬಡ್ಡಿ ಹಾಗೂ 3 ಲಕ್ಷದಿಂದ 10 ಲಕ್ಷ ರೂಗಳವರೆಗಿನ ಸಾಲಕ್ಕೆ ಶೆ. 3 ರಷ್ಟು ಬಡ್ಡಿಯನ್ನು ನಿಗದಿಪಡಿಸಲಾಗಿದೆ.
3. ಹನಿ ನೀರಾವರಿ ಯೋಜನೆಗೆ ಉತ್ತೇಜನ. ಇದರಡಿಯಲ್ಲಿ ಪರಿಶಿಷ್ಟ ಜಾತಿ/ಪಂಗಡದವರಿಗೆ ಶೇ. 90ರಷ್ಟು ಹಾಗೂ ಇತರರಿಗೆ ಶೇ. 75ರಷ್ಟು ಸಹಾಯಧನ ವಿತರಣೆ. ಅರ್ಜಿ ಸಲ್ಲಿಸಿದ ಎಲ್ಲಾ ಅರ್ಹ ಫಲಾನುಭವಿಗಳಿಗೆ ಈ ಸೌಲಭ್ಯ ದೊರೆಯುತ್ತದೆ.
4. ಸಾವಯವ ಕೃಷಿ ಯೋಜನೆಯ ಸುಧಾರಣೆ - ಹೋಬಳಿ ಮಟ್ಟಕ್ಕೆ ವಿಸ್ತರಣೆ. ಜತೆಗೆ ಸಾವಯವ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಸಂಪರ್ಕ ಕಲ್ಪಿಸಲು ಕ್ರಮ
5. ಪ್ರತಿ ಕಂದಾಯ ವಿಭಾಗದ ಒಂದು ಜಿಲ್ಲೆಯಲ್ಲಿ ಇಕ್ರಿಸ್ಯಾಟ್ (ಐಸಿಆರ್ಐಎಸ್ಎಟಿ) ಸಂಸ್ಥೆಯ ಮುಂದಾಳತ್ವದಲ್ಲಿ ಸಂಶೋಧನೆ ಆಧಾರಿತ ಕೃಷಿ ಪದ್ದತಿಯ ಅನುಷ್ಠಾನ.
6. ರೈತರಿಂದ ಉಗ್ರಾಣ ಮತ್ತು ಶೀಥಲೀಕರಣ ಘಟಕಗಳ ನಿರ್ಮಾಣಕ್ಕೆ ಬಡ್ಡಿ ಸಹಾಯಧನ ನೀಡುವ ಯೋಜನೆ
7. ಐದು ಅಶ್ವಶಕ್ತಿವರೆಗಿನ ಸೌರಶಕ್ತಿ ಪಂಪ್ಸೆಟ್ನ್ನು ರೈತರಿಗೆ ಒದಗಿಸುವ ಯೋಜನೆ ಪ್ರಾಯೋಗಿಕವಾಗಿ ರಾಜ್ಯದ ಉತ್ತರ ಭಾಗ ಹಾಗೂ ದಕ್ಷಿಣ ಭಾಗದ ತಲಾ ಒಂದೊಂದು ಜಿಲ್ಲೆಗಳಲ್ಲಿ ಜಾರಿ.
8. ಹೊಸ ತಳಿಯ ಆವಿಷ್ಕಾರ ಕುರಿತು ಸಂಶೋಧನೆ ನಡೆಸಲು ಹಾಗೂ ಸುಧಾರಿತ ತಾಂತ್ರಿಕತೆಯನ್ನು ಹೊರತರಲು ಕೃಷಿ ವಿಶ್ವವಿದ್ಯಾನಿಲಯಗಳಿಗೆ 5 ಕೋಟಿ ರೂ ನಿಗದಿ
9. ಗುಣಮಟ್ಟದ ಬಿತ್ತನೆ ಬೀಜಗಳನ್ನು ರೈತರೇ ಹೆಚ್ಚಿನ ಪ್ರಮಾಣದಲ್ಲಿ ಸ್ವತ: ಉತ್ಪಾದಿಸಲು ಅನುವಾಗುವಂತೆ `ಸ್ವ ಬೀಜಾಭಿವೃದ್ದಿ' ಯೋಜನೆಯ ಜಾರಿ. ಇದಕ್ಕಾಗಿ 10 ಕೋಟಿ ರೂ ನೀಡಿಕೆ.
10. ಒಟ್ಟಾರೆ ಕೃಷಿ ವಲಯಕ್ಕೆ 3095 ಕೋಟಿ ರೂ ನಿಗದಿ. .
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.