ಹಾವೇರಿ: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ರಾಜ್ಯ ಮಟ್ಟದ 32ನೇ ಕೃಷಿ ಮೇಳಕ್ಕೆ ಗುರುವಾರ ಇಲ್ಲಿಯ ಜಿ.ಎಚ್.ಕಾಲೇಜು ಮೈದಾನದಲ್ಲಿ ಅದ್ದೂರಿ ಚಾಲನೆ ನೀಡಲಾಯಿತು.
ಮೂರು ದಿನಗಳವರೆಗೆ ನಡೆಯುವ ಕೃಷಿ ಮೇಳವನ್ನು ರಾಜ್ಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಜಗದೀಶ ಶೆಟ್ಟರ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ, ಗದುಗಿನ ತೋಂಟದ ಸಿದ್ಧಲಿಂಗ ಶ್ರೀಗಳು ಸೇರಿದಂತೆ ವೇದಿಕೆ ಮೇಲಿದ್ದ ಗಣ್ಯರು ಕುಂಡಲಿಗೆ ನವಧಾನ್ಯಗಳನ್ನು ಹಾಕುವ ಮೂಲಕ ಕೃಷಿ ಮೇಳಕ್ಕೆ ಅರ್ಥಪೂರ್ಣ ಚಾಲನೆ ನೀಡಿದರು.
ನಂತರ ಸಚಿವ ಜಗದೀಶ ಶೆಟ್ಟರ ಮಾತನಾಡಿ, `ಕೃಷಿಯಲ್ಲಿ ಜೀವನ ಭದ್ರತೆ ಹಾಗೂ ವೃತ್ತಿ ಗೌರವ ದೊರೆಯುತ್ತಿಲ್ಲ. ಅದೇ ಕಾರಣಕ್ಕಾಗಿ ರೈತರು ಕೃಷಿಯಿಂದ ವಿಮುಖರಾಗಿ ಉದ್ಯೋಗ ಅರಸಿ ಶಹರಗಳತ್ತ ವಲಸೆ ಹೋಗುತ್ತಿದ್ದಾರೆ. ಇದನ್ನು ತಡೆಯುವುದು ತೀರಾ ಅಗತ್ಯವಾಗಿದೆ~ ಎಂದರು.
ರೈತರ ಬೆಳೆಗಳಿಗೆ ಸಮರ್ಪಕ ಬೆಲೆ ಸಿಗದಿರುವುದೇ ಅವರ ಸಂಕಷ್ಟಕ್ಕೆ ಕಾರಣವಾಗಿದೆ. ಬೆಳೆಗಳಿಗೆ ವೈಜ್ಞಾನಿಕ ಬೆಲೆ ದೊರಕಿಸಿಕೊಡುವತ್ತ ಸರ್ಕಾರಗಳು ಗಂಭೀರ ಚಿಂತನೆ ನಡೆಸಬೇಕೆಂದು ಸಲಹೆ ಮಾಡಿದರು.
ಜಾನಪದ ಪ್ರದರ್ಶನವನ್ನು ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಉದ್ಘಾಟಿಸಿದರು. ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಹಾಗೂ ಸೆಲ್ಕೋ ಸಂಸ್ಥೆ ವ್ಯವಸ್ಥಾಪಕ ಡಾ.ಎಚ್. ಹರೀಶ್ ಹಂದೆ, ಜಿಲ್ಲಾಧಿಕಾರಿ ಎಚ್.ಜಿ.ಶ್ರೀವರ, ಮಾಜಿ ಸಚಿವ ಬಸವರಾಜ ಶಿವಣ್ಣನವರ, ಶಾಸಕ ಎಂ.ಕ.ಕವಟಗಿಮಠ, ಹೇಮಾವತಿ ಹೆಗ್ಗಡೆ, ಕಾಡಾ ಅಧ್ಯಕ್ಷ ಸೋಮಣ್ಣ ಬೇವಿನಮರದ ಮತ್ತಿತರರು ಹಾಜರಿದ್ದರು.