ಹುಣಸಗಿ: ಕಾಲುವೆಗೆ ನೀರು ನಿಲುಗಡೆ ಮಾಡಿದ್ದರಿಂದ ತೀವ್ರ ಸಂಕಷ್ಟ ಎದುರಿ ಸುತ್ತಿದ್ದ ರೈತರು ಇದೀಗ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಶಾಸಕರ ನೇತೃತ್ವದಲ್ಲಿ ತೆರಳಿದ ರೈತರ ನಿಯೋಗವು ಹುಬ್ಬಳ್ಳಿಯಲ್ಲಿ ಜಲ ಸಂಪನ್ಮೂಲ ಸಚಿವರನ್ನು ಭೇಟಿ ಮಾಡಿದ್ದು ಫಲಪ್ರದವಾಗಿದ್ದು, ಇನ್ನೂ ಒಂದು ವಾರ ಕಾಲುವೆಗೆ ನೀರು ಬಿಡಲು ಆದೇಶಿಸಲಾಗಿದೆ.ಹುಬ್ಬಳ್ಳಿಯಲ್ಲಿ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ರೈತರ ನಿಯೋಗದ ನೇತೃತ್ವ ವಹಿಸಿದ್ದ ಶಾಸಕ ನರಸಿಂಹ ನಾಯಕ (ರಾಜುಗೌಡ) ಕುರಿತು ‘ಪ್ರಜಾ ವಾಣಿ’ಗೆ ಮಾಹಿತಿ ನೀಡಿದ್ದಾರೆ.
ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ನೀರಿನ ತೊಂದರೆಯಿಂದಾಗಿ ರೈತರು ತೀವ್ರ ಸಂಕಷ್ಟದಲ್ಲಿದ್ದು, ಫಸಲು ಕಾಳು ಕಟ್ಟುವ ಹಂತದಲ್ಲಿ ಇರುವುದರಿಂದ ನೀರು ಅತ್ಯವಶ್ಯವಾಗಿದೆ. ರೈತರ ಸಮಸ್ಯೆಯನ್ನು ಜಲಸಂಪನ್ಮೂಲ ಸಚಿವರಿಗೆ ಮನವರಿಕೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಕಾಲುವೆಗೆ ಇನ್ನೂ ಒಂದು ವಾರ ಹೆಚ್ಚುವರಿಯಾಗಿ ನೀರನ್ನು ಹರಿಸಲು ಸಚಿವ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಆದೇಶಿ ಸಿದ್ದಾರೆ ಎಂದು ಶಾಸಕ ನರಸಿಂಹ ನಾಯಕ (ರಾಜುಗೌಡ) ದೂರವಾಣಿ ಮೂಲಕ ‘ಪ್ರಜಾವಾಣಿ’ಗೆ ತಿಳಿಸಿದರು.
ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ರೈತಪರ ಸರ್ಕಾರವಾಗಿದ್ದು, ಅಧಿಕಾರ ದಲ್ಲಿರುವವರೆಗೆ ರೈತರಿಗೆ ನೋವಾಗು ವಂತೆ ನಡೆದುಕೊಳ್ಳುವುದಿಲ್ಲ. ರೈತರಿಗೆ ತೊಂದರೆಯಾಗದಂತೆ ಇನ್ನೂ ಒಂದು ವಾರ ಹೆಚ್ಚುವರಿಯಾಗಿ ನೀರು ಹರಿಸಲು ಕ್ರಮ ಕೈಗೊಳ್ಳುವದಾಗಿ ಸಚಿವರು ತಿಳಿಸಿದ್ದಾರೆ ಎಂದು ಶಾಸಕ ರಾಜುಗೌಡ ಹೇಳಿದರು. ಈ ಹಿನ್ನೆಲೆಯಲ್ಲಿ ರೈತರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಇನ್ನೂ ಒಂದು ವಾರ ಕಾಲುವೆಗೆ ನೀರು ಬಿಡಲಾಗುತ್ತಿದೆ ಎಂದು ತಿಳಿಸಿದರು.
ಎಡದಂಡೆ ಮುಖ್ಯ ಕಾಲುವೆಗೆ ದಿಢೀರನೇ ನೀರು ಸ್ಥಗಿತಗೊಳಿಸಿದ್ದರಿಂದ ರೈತರು ಆತಂಕಕ್ಕೆ ಒಳಗಾಗಿದ್ದರು. ಭಾನುವಾರ ಸಂಜೆ ನೂರಾರು ರೈತರು, ಶಾಸಕ ರಾಜುಗೌಡ ಅವರನ್ನು ಭೇಟಿ ಯಾಗಿ ಈ ಕುರಿತು ಚರ್ಚಿಸಿದ್ದರು. ರೈತರ ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಶಾಸಕ ರಾಜುಗೌಡ, ತಾಲ್ಲೂಕಿನ ರೈತ ರೊಂದಿಗೆ ಹುಬ್ಬಳ್ಳಿಗೆ ತೆರಳಿ ಸೋಮ ವಾರ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದರು.
ಶಾಸಕರೊಂದಿಗೆ ಚಂದ್ರಶೇಖರಗೌಡ ಮಾಗನೂರ, ಸುರೇಶ ಸಜ್ಜನ, ಶರಣು ದಂಡಿನ್, ವೆಂಕಟೇಶ, ಅಡಿವೆಪ್ಪ, ಆಮಯ್ಯಸ್ವಾಮಿ, ಬಸವರಾಜ ಜಮದರ ಖಾನ ಸೇರಿದಂತೆ ನೂರಾರು ರೈತರು ತೆರಳಿದ್ದರು. ರೈತರ ಹಿತ ಕಾಪಾಡಿದ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಶಾಸಕ ನರಸಿಂಹ ನಾಯಕ (ರಾಜು ಗೌಡ) ಅವರನ್ನು ತಾಲ್ಲೂಕಿನ ರೈತರು ಅಭಿನಂದಿಸಿದ್ದಾರೆ.
20ರಂದು ರಥೋತ್ಸವ ಗುಲ್ಬರ್ಗ: ಜಿಲ್ಲೆಯ ಸೇಡಂ ತಾಲ್ಲೂಕಿನ ಕೋಡ್ಲಾ ಗ್ರಾಮದ ಉರಿಲಿಂಗ ಪೆದ್ದೀಶ್ವರ ಸಂಸ್ಥಾನಮಠದ ಶಿವ ಯೋಗಿಶ್ವರ 31ನೇ ಜಾತ್ರಾ ಮಹೋತ್ಸವ ಆರಂಭವಾಗಿದೆ. 19ರಂದು ಗದ್ದುಗೆಗೆ ಬಿಲ್ವಾರ್ಚನೆ ಪೂಜೆ, ಮಂಗಳಾರತಿ ನಡೆಯುವುದು. 20ರಂದು ಸಂಜೆ 6.30ಕ್ಕೆ ರಥೋ ತ್ಸವ ಜರುಗವುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.