ಧಾರವಾಡ: ‘ರೈತರಿಗೆ ಅನುಕೂಲವಾಗುವಂತೆ ಕೃಷಿ ಬೆಲೆ ನೀತಿಯನ್ನು ಅಳವಡಿಸುವಿಕೆ ಹಾಗೂ ಕೃಷಿ ಮಾರುಕಟ್ಟೆ ವ್ಯವಸ್ಥೆಗೆ ಸೂಕ್ತವಾದ ಬದಲಾವಣೆಯ ಅಗತ್ಯವಿದೆ’ ಎಂದು ಭಾರತೀಯ ಕೃಷಿ ಮಾರುಕಟ್ಟೆ ಸಂಘದ ಮಾಜಿ ಅಧ್ಯಕ್ಷ ಡಾ.ಎಸ್.ಎಸ್.ಆಚಾರ್ಯ ಪ್ರತಿಪಾದಿಸಿದರು.
ರಾಜ್ಯ ಕೃಷಿ ಮಾರುಕಟ್ಟೆ ಮಂಡಳಿ ಹಾಗೂ ಅಂತರರಾಷ್ಟ್ರೀಯ ಕೃಷಿ ಮಾರುಕಟ್ಟೆ ಸಂಘದ ಸಹಯೋಗದಲ್ಲಿ ಇಲ್ಲಿಯ ಕೃಷಿ ವಿ.ವಿ. ಆವರಣದಲ್ಲಿ ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ಕೃಷಿ ಮಾರುಕಟ್ಟೆ 27ನೇ ಸಮ್ಮೇಳನ ಉದ್ಘಾಟಿಸಿದ ಅವರು, ‘ರೈತರ ಆದಾಯ ಹೆಚ್ಚಿಸುವ, ಆಹಾರ ಭದ್ರತೆಯನ್ನು ಒದಗಿಸುವ ಕೃಷಿ ಮಾರುಕಟ್ಟೆ ವ್ಯವಸ್ಥೆ ಇಂದಿನ ಅಗತ್ಯವಾಗಿದೆ’ ಎಂದರು.
‘ಭಾರತದಲ್ಲಿ ಕಠಿಣ ನೀತಿಯಿಂದಾಗಿ ಕೃಷಿ ಉತ್ಪನ್ನಗಳ ರಪ್ತು ನಿರೀಕ್ಷಿತ ಪ್ರಮಾಣದಲ್ಲಿ ಆಗುತ್ತಿಲ್ಲ’ ಎಂದು ಆಸ್ಟ್ರೇಲಿಯಾದ ಕ್ರಾಫರ್ಡ್ ಸ್ಕೂಲ್ ಆಫ್ ಎಕನಾಮಿಕ್ಸ್ ಪ್ರಾಧ್ಯಾಪಕ ಪ್ರೊ.ಕೆ.ಪಿ.ಕಾಳಿರಾಜನ್ ಹೇಳಿದರು.
‘ಉದ್ಯೋಗ ಭದ್ರತೆ ಇಲ್ಲದೇ ಇರುವುದರಿಂದ ಕೃಷಿ ಮಾರುಕಟ್ಟೆ ಪದವಿಯನ್ನು ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಕೃಷಿ ಮಾರುಕಟ್ಟೆ ಮಂಡಳಿಯು ಇತ್ತೀಚೆಗೆ ಕೃಷಿ ಮಾರುಕಟ್ಟೆ ಸಂಬಂಧಿ ವಿಶೇಷ ಉದ್ದೇಶದ ವಾಹನ (ಎಸ್ಪಿವಿ)ವನ್ನು ಪರಿಚಯಿಸುವ ಮೂಲಕ ಉದ್ಯೋಗದ ಹೊಸ ದಾರಿಯೊಂದನ್ನು ತೆರೆದಿದೆ’ ಎಂದು ಅಧ್ಯಕ್ಷತೆ ವಹಿಸಿದ್ದ ಕೃಷಿ ವಿ.ವಿ. ಕುಲಪತಿ ಡಾ.ಎಚ್.ಎಸ್. ವಿಜಯ ಕುಮಾರ್ ಹೇಳಿದರು.
ಕೃಷಿ ಮಹಾವಿದ್ಯಾಲಯದ ಡೀನ್ (ಕೃಷಿ) ಡಾ.ಜಿ.ಎಸ್.ದಾಸೋಗ ಸ್ವಾಗತಿಸಿದರು. ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಡಾ.ಎಸ್.ಎಂ. ಮುಂದಿನಮನಿ ವಂದಿಸಿದರು.
ಮೂರು ದಿನಗಳ ಈ ಸಮ್ಮೇಳನದಲ್ಲಿ 88 ಪ್ರಬಂಧಗಳು ಮಂಡನೆಯಾಗಲಿವೆ.