ಹೊಸಪೇಟೆ: ರೋಟರಿ ಕ್ಲಬ್ `ಮಹಾಉತ್ಸವ' ಎಂಬ ಶೀರ್ಷಿಕೆಯಡಿ ಯುವಕರಿಗಾಗಿ ವೈವಿಧ್ಯಮಯ ಚಟುವಟಿಕೆಗಳ ಕಾರ್ಯಕ್ರಮ ಹಮ್ಮಿಕೊಂಡಿದ್ದು ಆ ಮೂಲಕ ಸಮಾಜಮುಖಿ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ ಎಂದು ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಎಲ್. ಡಿ. ಜೋಷಿ ಹೇಳಿದರು.
ಸೋಮವಾರ ರೋಟರಿ ಕ್ಲಬ್ನಲ್ಲಿ ಹಮ್ಮಿಕೊಂಡ `ಮಹಾ ಉತ್ಸವ' ಕಾರ್ಯಕ್ರಮದಡಿ ಚೆಸ್ ಹಾಗೂ ಮೆಹಂದಿ ಸ್ಪರ್ಧೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಳ ಪ್ರತಿಭೆ ಹೊರಬರಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿದೆ ರೋಟರಿ ಸಂಸ್ಥೆಯು ಶಿಕ್ಷಣಕ್ಕೆ ಒತ್ತುಕೊಡುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದು ಇಂತಹ ಇತರೆ ಚುಟುವಟಿಕೆಗಳು ಪೂರಕವಾಗಲಿವೆ ಎಂದರು.
ಇಂತಹ ಸ್ಪರ್ಧಾ ಚಟುವಟಿಕೆ ಕಾರ್ಯಕ್ರಮಗಳು ಕೆಲವೇ ಶಾಲೆಗಳಿಗೆ ಸೀಮಿತವಾಗದೆ, ಎಲ್ಲಾ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಪ್ರಯೋಜನ ಪಡೆಯುವಂತಾಗಲು ಶಿಕ್ಷಕರು ಶ್ರಮಿಸಬೇಕು,ಇಂತಹ ಸ್ಪರ್ಧಾ ಚಟುವಟಿಕೆಗಳು ಶಿಕ್ಷಕರಿಗೆ ಹೆಚ್ಚಿನ ಜ್ಞಾನ ಗಳಿಸಲು ಸಹಕಾರಿಯಾಗಲಿದೆ ಎಂದು ಅಭಿಪ್ರಾಯ ಪಟ್ಟರು.
ವೇದಿಕೆಯಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಎಚ್.ಶ್ರೀನಿವಾಸರಾವ್, ಕಾರ್ಯದರ್ಶಿ ಕೆ.ಸೈಯದ್ ಮಹಮದ್, ರೋಟರಿ ಜಿಲ್ಲಾ ಗವರ್ನರ್ ಗೋಪಿನಾಥ, ಎ.ಎಸ್. ಕಿಶೋರ್, ಮುನಿವಾಸುದೇವರೆಡ್ಡಿ, ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಮಾಧವಿ, ಕಾರ್ಯದರ್ಶಿ ಮೇಘನಾ ಹಾಗೂ ಮಣಿ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಕೆ.ಎಸ್. ಕೃಷ್ಣಮೂರ್ತಿ ಮತ್ತು ವೀಣಾ ಕೊತಂಬರಿ ಪ್ರಾರ್ಥನಾ ಗೀತೆ ಹಾಡಿದರು. ಎಚ್.ಶ್ರೀನಿವಾಸ ರಾವ್ ಸ್ವಾಗತಿಸಿದರು. ಅಶ್ವಿನಿ ಕೊತಂಬರಿ ನಿರೂಪಿಸಿದರು. ಸೈಯದ್ ಮಹಮದ್ ವಂದಿಸಿದರು.