ನವದೆಹಲಿ, (ಐಎಎನ್ಎಸ್): ದೇಶದಲ್ಲಿ ಇದೇ ಮೊದಲ ಬಾರಿ, ಗುಡಗಾಂವ್ನ ಮೇದಾಂತ ಮೆಡಿಸಿಟಿ ಆಸ್ಪತ್ರೆಯಲ್ಲಿ ರೋಬೋಟ್ ನೆರವಿನಿಂದ ಕರ್ನಾಟಕ ಮೂಲದ ನಾಲ್ಕು ವರ್ಷದ ಬಾಲಕನೊಬ್ಬನ ಪಿತ್ತಜನಕಾಂಗವನ್ನು ಯಶಸ್ವಿಯಾಗಿ ಕಸಿ ಮಾಡಲಾಗಿದೆ.
`ಕಳೆದ ತಿಂಗಳು ನಡೆದ ಈ ಶಸ್ತ್ರಚಿಕಿತ್ಸೆಯಲ್ಲಿ 36ರ ಹರೆಯದ ರಹಮತುಲ್ಲ ಎಂಬುವವರ ಮೇದೋಜೀರಕ ಗ್ರಂಥಿಯ ಶೇ20ರಷ್ಟು ಭಾಗವನ್ನು ಅವರ ಸಹೋದರನ ಮಗ ಜಿಯಾದ್ಗೆ ಕಸಿ ಮಾಡಲಾಯಿತು. ಇದು ರೋಬೋಟ್ ನೆರವಿನಿಂದ ನಡೆದ ವಿಶ್ವದ ಮೂರನೇ ನೇರ ಶಸ್ತ್ರಚಿಕಿತ್ಸೆ~ ಎಂದು ವೈದ್ಯರು ತಿಳಿಸಿದ್ದಾರೆ.
ಜಿಯಾದ್ನ ಪಿತ್ತಜನಕಾಂಗ ಪ್ರೊಟೀನ್ಗಳನ್ನು ಜೀರ್ಣಿಸಿಕೊಳ್ಳುವ ಶಕ್ತಿ ಕಳೆದುಕೊಂಡಿತ್ತಲ್ಲದೆ ಕ್ರಮೇಣ ಅದು ಕ್ಯಾನ್ಸರ್ಗೆ ತಿರುಗಿತ್ತು. ರೋಗದ ಆರಂಭಿಕ ಚಿಹ್ನೆಗಳು 2 ವರ್ಷದವನಿದ್ದಾಗಲೇ ಕಾಣಿಸಿಕೊಂಡಿದ್ದರೂ ವೈದ್ಯರಿಗೆ ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ.
ಚಿತ್ರದುರ್ಗದವರಾದ ಜಿಯಾದ್ನ ಹೆತ್ತವರು ಮಸ್ಕತ್ನಲ್ಲಿ ನೆಲೆಸಿದ್ದಾರೆ. ಅಲ್ಲಿ ಶಸ್ತ್ರಚಿಕಿತ್ಸಾ ವೆಚ್ಚ ದುಬಾರಿಯಾದ್ದರಿಂದ ಭಾರತದಲ್ಲಿ ನಡೆಸಲು ನಿರ್ಧರಿಸಿದ್ದರು. ಒಟ್ಟು ವೆಚ್ಚ ರೂ 15 ಲಕ್ಷವನ್ನು ದಾನಿಗಳಿಂದ ಸಂಗ್ರಹಿಸಲಾಗಿತ್ತು.