ಬೆಂಗಳೂರು: ಮೈಸೂರು ರಸ್ತೆಯ ಹಳೇ ಪೆನ್ಶನ್ ಮೊಹಲ್ಲಾದಲ್ಲಿ ಡಿ.21ರಂದು ನಡೆದಿದ್ದ ರೌಡಿ ಜೀವನ್ ಅಲಿಯಾಸ್ ಜೀವೇಂದ್ರ (25) ಕೊಲೆ ಪ್ರಕರಣ ಸಂಬಂಧ ಕಾಟನ್ಪೇಟೆ ಪೊಲೀಸರು ಐದು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಸಿದ್ದಾರ್ಥನಗರದ ಇಮ್ರಾನ್, ಯಾಸಿನ್, ಅಫ್ರೇಜ್, ತನ್ವೀರ್ ಹಾಗೂ ತಬ್ರೇಜ್ ಬಂಧಿತರು. ಆರೋಪಿಗಳು ಕಳೆದ ವರ್ಷ ಕೊಲೆಯಾದ ಗುಪೇಂದ್ರ ಅಲಿಯಾಸ್ ಗುಪ್ಪನ ಸಹಚರರು ಎಂದು ಪೊಲೀಸರು ತಿಳಿಸಿದ್ದಾರೆ.
ಗುಪೇಂದ್ರನನ್ನು ಕೊಲೆ ಮಾಡಿ ಜೈಲಿಗೆ ಹೋಗಿದ್ದ ಜೀವನ್, 15 ದಿನಗಳ ಹಿಂದಷ್ಟೇ ಜೈಲಿನಿಂದ ಹೊರಬಂದಿದ್ದ. ಆತನ ಬಿಡುಗಡೆಗಾಗಿಯೇ ಕಾಯುತ್ತಿದ್ದ ಗುಪೇಂದ್ರನ ಸಹಚರರು, ಜೀವನ್ ಕೊಲೆಗೆ ಸಂಚು ರೂಪಿಸಿದ್ದರು. ಡಿ.21ರಂದು ಹಳೇ ಪೆನ್ಶನ್ ಮೊಹಲ್ಲಾದ ಮಸೀದಿಗೆ ಸಚರರನ್ನು ಭೇಟಿ ಮಾಡಲು ನಡೆದು ಹೋಗತ್ತಿದ್ದ ಜೀವನ್ ಮೇಲೆ ದುಷ್ಕರ್ಮಿಗಳು ಮಚ್ಚು ಲಾಂಗುಗಳಿಂದ ಹಲ್ಲೆ ನಡೆಸಿದ್ದರು. ಬಳಿಕ ತಪ್ಪಿಸಿಕೊಂಡು ಓಡುತ್ತಿದ್ದ ಆತನನ್ನು ಬೆನ್ನ ಟ್ಟಿದ ಆರೋಪಿಗಳು, ಕೈಪಂಪಿಗೆ ತಲೆ ಗುದ್ದಿಸಿ ಕೊಲೆ ಮಾಡಿ ಪರಾರಿ ಯಾಗಿದ್ದರು.
‘ದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ ಎಂಬುದು ಪ್ರಾಥಮಿಕ ಹಂತದಲ್ಲೇ ಗೊತ್ತಾಯಿತು. ಹೀಗಾಗಿ ಗುಪೇಂದ್ರನ ಕೆಲ ಸಹಚರರ ವಿಚಾರಣೆ ನಡೆಸಿದಾಗ ಕೃತ್ಯದ ಹಿಂದಿರುವವರ ಬಗ್ಗೆ ಸುಳಿವು ದೊರೆಯಿತು.
ಇದಕ್ಕೆ ಪೂರಕ ವೆಂಬಂತೆ ಆರೋಪಿಗಳು ಸಹ ಊರು ಬಿಟ್ಟಿದ್ದರು. ಬಳಿಕ ಅವರ ಮೊಬೈಲ್ ಕರೆಗಳನ್ನು ಆಧರಿಸಿ ಬಂಧಿಸಿ ಠಾಣೆಗೆ ಕರೆತರಲಾಗಿದೆ. ತಾವೇ ಕೃತ್ಯ ಎಸಗಿದ್ದಾಗಿ ಬಂಧಿತರು ತಪ್ಪೊಪ್ಪಿಕೊಂಡಿದ್ದಾರೆ’ ಎಂದು ಹಿರಿಯ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.