ಬೆಂಗಳೂರು: ಸ್ಥಿರಾಸ್ತಿಯೊಂದರ ದಾನಪತ್ರಕ್ಕೆ ಖಾತಾ ಸಂಖ್ಯೆ ನೀಡಲು 20 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪಶ್ಚಿಮ ವಲಯದ ಕಂದಾಯ ನಿರೀಕ್ಷಿಕ ಕುಮಾರ್ ಮತ್ತು ಕೃತ್ಯಕ್ಕೆ ಸಹಕಾರ ನೀಡಿದ ಪ್ರಭಾಕರ್ ಎಂಬ ಖಾಸಗಿ ಮಧ್ಯವರ್ತಿಯನ್ನು ಲೋಕಾಯುಕ್ತ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಜೋಗುಪಾಳ್ಯ ನಿವಾಸಿ ಮುನಿಕೃಷ್ಣ ಅವರು ದಾನಪತ್ರವೊಂದನ್ನು ಆಧರಿಸಿ ಸ್ಥಿರಾಸ್ತಿಯೊಂದಕ್ಕೆ ಖಾತಾ ಸಂಖ್ಯೆ ನೀಡುವಂತೆ ಮೆಯೋಹಾಲ್ನಲ್ಲಿರುವ ಬಿಬಿಎಂಪಿ ಪಶ್ಚಿಮ ವಲಯ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಕೆಲ ದಿನಗಳಾದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಈ ಹಿನ್ನೆಲೆಯಲ್ಲಿ ಅರ್ಜಿದಾರರು ಮತ್ತು ಅವರ ವಕೀಲರಾದ ಗೋವಿಂದರಾಜು ಕಂದಾಯ ನಿರೀಕ್ಷಕರನ್ನು ಭೇಟಿಮಾಡಿ ವಿಚಾರಿಸಿದ್ದರು. ಪ್ರಕ್ರಿಯೆ ಪೂರ್ಣಗೊಳಿಸಲು ರೂ 20 ಸಾವಿರ ಲಂಚ ನೀಡುವಂತೆ ಕುಮಾರ್ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಅರ್ಜಿದಾರರು ಬೆಂಗಳೂರುನಗರ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಗುರುವಾರ ಗೋವಿಂದರಾಜು ಅವರು ಆರೋಪಿಯನ್ನು ದೂರವಾಣಿ ಮೂಲಕ ಸಂಪರ್ಕಿಸಿ ಕುಮಾರ್ ಅವರ ಪರವಾಗಿ ಹಣ ನೀಡಲು ಬರುತ್ತಿರುವುದಾಗಿ ತಿಳಿಸಿದರು. ಆಗ, ಜೋಗುಪಾಳ್ಯದ ಪಾಲಿಕೆ ವಾರ್ಡ್ ಕಚೇರಿಗೆ ಬರುವಂತೆ ಸೂಚಿಸಿದರು.
ಅಲ್ಲಿಗೆ ತೆರಳಿದ ಗೋವಿಂದರಾಜು ಹಣ ನೀಡಲು ಹೋದಾಗ, ಪಕ್ಕದಲ್ಲಿದ್ದ ಖಾಸಗಿ ವ್ಯಕ್ತಿಗೆ ನೀಡುವಂತೆ ಕುಮಾರ್ ಸೂಚಿಸಿದರು. ಆರೋಪಿಯ ಸೂಚನೆಯಂತೆ ವಕೀಲರು ಹಣ ನೀಡಿದರು. ತಕ್ಷಣ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಆರೋಪಿಗಳನ್ನು ಬಂಧಿಸಿದರು.
ಬೆಂಗಳೂರು ನಗರ ಲೋಕಾಯುಕ್ತ ಎಸ್ಪಿ ಪಿ.ಕೆ.ಶಿವಶಂಕರ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇನ್ಸ್ಪೆಕ್ಟರ್ಗಳಾದ ಸಣ್ಣತಿಮ್ಮಪ್ಪ ಒಡೆಯರ್, ರೇಣುಕಾ ಪ್ರಸಾದ್ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.