ಗದಗ: ಬರುವ ಭಾನುವಾರದಿಂದ ಎರಡು ದಿನಗಳ ಕಾಲ ನಡೆಯುವ ಐತಿಹಾಸಿಕ ಲಕ್ಕುಂಡಿ ಉತ್ಸವದ ಅಂಗವಾಗಿ ಹಾಗೂ ಅಂತರರಾಷ್ಟ್ರೀಯ ಅರಣ್ಯ ವರ್ಷಾಚರಣೆ ಹಿನ್ನೆಲೆಯಲ್ಲಿ ಗದುಗಿನಲ್ಲಿ ಶುಕ್ರವಾರ ಮ್ಯಾರಥಾನ್ ಓಟ ನಡೆಯಿತು.ಮುಳಗುಂದ ನಾಕಾ ಸರ್ಕಲ್ ಬಳಿ ಜಿಲ್ಲಾಧಿಕಾರಿ ಎಸ್.ಶಂಕರ ನಾರಾಯಣ ಮ್ಯಾರಥಾನ್ ಓಟಕ್ಕೆ ಹಸಿರು ನಿಶಾನೆ ತೋರಿಸಿದರು. ಜಿಲ್ಲಾ ಪಂಚಾಯ್ತಿ ಸಿಇಓ ವೀರಣ್ಣ ಜಿ.ತುರಮರಿ ಶುಭಕೋರಿದರು.
ಮುಳಗುಂದ ನಾಕಾ ರಸ್ತೆ, ಮಾರುಕಟ್ಟೆ ರಸ್ತೆ, ಕೆ.ಎಚ್.ಪಾಟೀಲ ಪ್ರತಿಮೆ, ಹಳೇ ಬಸ್ ನಿಲ್ದಾಣ ರಸ್ತೆ, ರೋಟರಿ ಸರ್ಕಲ್, ಭೂಮರಡ್ಡಿ ಸರ್ಕಲ್, ಪಾಲಾ-ಬದಾಮಿ ರಸ್ತೆ ಮೂಲಕ ಸಾಗಿದ ಓಟ ತೋಂಟದಾರ್ಯ ಎಂಜಿನಿಯರಿಂಗ್ ಕಾಲೇಜು ಬಳಿ ಸಮಾಪ್ತಿಗೊಂಡಿತು. ಮ್ಯಾರಥಾನ್ ಓಟದಲ್ಲಿ ಜೆಟಿ ಕಾಲೇಜು, ತೋಂಟದಾರ್ಯ ಎಂಜಿನಿಯರಿಂಗ್ ಕಾಲೇಜು, ದೈಹಿಕ ಶಿಕ್ಷಣ ಕಾಲೇಜು, ವಿವಿಧ ವಸತಿ ನಿಲಯಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಬಾಲಕರು, ಸ್ಥಳೀಯ ಯುವಕರು, ಕ್ರೀಡಾಸ್ತಕರು ಸೇರಿದಂತೆ ಸುಮಾರು 600ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.
ಮುಂಜಾನೆ ಚುಮು-ಚುಮು ಬಿಸಿಲಿನಲ್ಲಿ ಪ್ರಾರಂಭವಾದ ಮ್ಯಾರಾಥನ್ ಓಟ, ಸೂರ್ಯ ತನ್ನ ಪ್ರಖರತೆ ಬೀರುವ ಮೊದಲು ಕೊನೆಗೊಂಡಿತು. ಓಟದಲ್ಲಿ ಭಾಗವಹಿಸಿದ್ದವರಿಗೆಲ್ಲರಿಗೂ ತೋಂಟದಾರ್ಯ ಮಠದ ವತಿಯಿಂದ ಉಪಹಾರ ವ್ಯವಸ್ಥೆ ಮಾಡಲಾಗಿತ್ತು.
ಲಕ್ಕುಂಡಿ ಉತ್ಸವದ ಕ್ರೀಡಾ ಸಮಿತಿ ಅಧ್ಯಕ್ಷ ಶಿವನಗೌಡ ಪಾಟೀಲ, ಸದಸ್ಯ ಕಾರ್ಯದರ್ಶಿ ಸೋಮಶೇಖರ ಗೌಡ್ರ ಮತ್ತಿತರರು ಮ್ಯಾರಥಾನ್ ಓಟದಲ್ಲಿ ಭಾಗವಹಿಸಿ ಕ್ರೀಡಾಳುಗಳಿಗೆ ಹುರುಪು ತುಂಬಿದರು.