ಸಿರುಗುಪ್ಪ: ತಾಲ್ಲೂಕಿನ ಸಂತ್ರಸ್ತರಿಗೆ ಮನೆಗಳ ವಿತರಣೆಗೆ ಸಂಬಂಧಿಸಿದಂತೆ ಸೋಮವಾರ ಸಂಜೆ ತಾಲ್ಲೂಕು ಕಚೇರಿಯ ಆವರಣದಲ್ಲಿ ಲಾಟರಿ ಮೂಲಕ ಮನೆಗಳ ಹಂಚಿಕೆಗೆ ತಾಲ್ಲೂಕು ಆಡಳಿತ ಸಿದ್ಧತೆ ನಡೆಸಿತ್ತು. ಆದರೆ ತಾಲ್ಲೂಕಿನ ಚಳ್ಳೆಕೂಡೂರ್ಲು, ಮಾಟೂರು, ಚಿಕ್ಕಬಳ್ಳಾರಿ, ಹೊನ್ನರ ಹಳ್ಳಿ, ಶ್ರಿಧರಗಡ್ಡೆ ಗ್ರಾಮದ ಎಲ್ಲಾ ಸಮುದಾಯದ ಜನರು ಮನೆಗಳ ವಿತರಣೆಯಲ್ಲಿ ಲಾಟರಿ ಪದ್ಧತಿಯನ್ನು ವಿರೋಧಿಸಿದರು.
ಲಾಟರಿ ಮೂಲಕ ಮನೆ ಹಂಚಿಕೆ ಮಾಡುವ ವಿಧಾನವನ್ನು ವಿರೋಧಿಸಿ ಅಲ್ಲಿ ಉಪಸ್ಥಿತರಿದ್ದ ಶಾಸಕ ಎಂ. ಎಸ್. ಸೋಮಲಿಂಗಪ್ಪ ಅವರಿಗೆ ಮನವಿ ಪತ್ರಗಳನ್ನು ಸಲ್ಲಿಸಿದರು. ನಮಗೆ ಈ ಮೊದಲು ಹಳೇ ಗ್ರಾಮದಲ್ಲಿ ಇರುವ ರೀತಿಯಲ್ಲಿಯೇ ಮನೆಗಳನ್ನು ವಿತರಿಸ ಬೇಕು ಎಂದು ಒತ್ತಾಯಿಸಿದರು.
ಶಾಸಕರು, ಸಮಾಜದಲ್ಲಿ ಸಮಾನತೆ ಮೂಡಿಸುವಲ್ಲಿ ಮತ್ತು ಜಾತ್ಯತೀತ ನವಗ್ರಾಮಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸರಕಾರ ಲಾಟರಿ ಮೂಲಕ ಸಂತ್ರಸ್ತರಿಗೆ ಮನೆಗಳ ವಿತರಣೆಗೆ ಮುಂದಾಗಿದೆ. ಇದಕ್ಕೆ ತಮ್ಮ ಒಪ್ಪಿಗೆ ಇಲ್ಲವಾದರೆ ನಿಮ್ಮ ಇಚ್ಛೆಯಂತೆ ಗ್ರಾಮ ಪಂಚಾಯಿತಿಯಲ್ಲಿನ ಮನೆಗಳ ಸಂಖ್ಯೆ ಯಂತೆ ಸಂತ್ರಸ್ತರಿಗೆ ಮನೆಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಗ್ರಾಮಸ್ಥರ ಕೋರಿಕೆಗೆ ಸ್ಪಂದಿಸಿ ಲಾಟರಿ ಕಾರ್ಯಕ್ರಮ ಸ್ಥಗಿತಗೊಳಿಸ ಲಾಯಿತು. ಸಹಾಯಕ ಆಯುಕ್ತ ವೆಂಕಟೇಶ ಮಾತನಾಡಿ ತಮ್ಮೆಲ್ಲರ ಇಚ್ಛೆಯಂತೆ ಗ್ರಾ.ಪಂ.ನಲ್ಲಿನ ನೋಂದಣಿಯಂತೆ ಮನೆ ವಿತರಿಸಲಾಗುವುದು. ಆದರೆ ಗ್ರಾ.ಪಂ.ನಲ್ಲಿ ಕೊನೆಯ ನಂಬರಿನ ವ್ಯಕ್ತಿಗೆ ನವಗ್ರಾಮದಲ್ಲಿ ಮೊದಲ ಸಂಖ್ಯೆಯಿಂದ ಪ್ರಾರಂಭಿಸಲಾ ಗುವುದು. ಜೂನ್ 25ರಂದು ಚಳ್ಳೆ ಕೂಡೂರ್ಲು, ಮಾಟೂರು, ಚಿಕ್ಕ ಬಳ್ಳಾರಿ, ಹೊನ್ನರಹಳ್ಳಿ, ಶ್ರಿಧರಗಡ್ಡೆ ಗ್ರಾಮಗಳಲ್ಲಿ ಸಂತ್ರಸ್ತರಿಗೆ ಮನೆಗಳನ್ನು ವಿತರಿಸಲಾಗುವುದು, ಜೂ.26ರಂದು ಮುದ್ದಟನೂರು, ಗುಂಡಿಗನೂರು ಮತ್ತು ಮೈಲಾಪುರ ಗ್ರಾಮಗಳ ಸಂತ್ರಸ್ತರಿಗೆ ಮನೆಗಳನ್ನು ಹಂಚಿಕೆ ಮಾಡಲಾಗುವುದು ಎಂದರು.
ತಹಸೀಲ್ದಾರ್ ಡಾ. ಎನ್.ಆರ್. ಗೀತಾ, ಮಂಗಳವಾರ ಸಂಜೆಯ ಒಳಗೆ ಆಯಾ ಗ್ರಾಮ ಪಂಚಾಯಿತಿಗಳಲ್ಲಿ ಮನೆ ಹಂಚಿಕೆ ಮಾಡಿರುವ ಪಟ್ಟಿಯನ್ನು ಪ್ರಕಟಿಸಲಾಗುವುದು.
ಗ್ರಾಮ ಪಂಚಾಯಿತಿಯ ಪುಸ್ತಕ ದಲ್ಲಿ ಮನೆಯ ಸಂಖ್ಯೆ ಇದ್ದು ಮನೆ ಹಂಚಿಕೆಯಾಗದೆ ಇದ್ದಲ್ಲಿ, ಮನವಿ ನೀಡುವಂತೆ ತಿಳಿಸಿದರು.
ತಾ.ಪಂ.ಇ.ಒ ಪಿ.ತಿಪ್ಪೇರುದ್ರಪ್ಪ ಮತ್ತು ತಾಲ್ಲೂಕಿನ 5 ಗ್ರಾಮಗಳ ನೂರಾರು ಸಂತ್ರಸ್ತರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.