ಬೆಂಗಳೂರು: ನೈಸ್ ರಸ್ತೆಯ ಮೇಲ್ಸೇತುವೆಯಲ್ಲಿ ಚಲಿಸುತ್ತಿದ್ದ ಲಾರಿಗೆ ಬೈಕ್ ಗುದ್ದಿಸಿದ ಪರಿಣಾಮ ಸುರೇಶ್ (27) ಎಂಬುವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಸಿದ್ದಾರ್ಥನಗರದ ನಿವಾಸಿಯಾದ ಸುರೇಶ್ ಮೆಕ್ಯಾನಿಕ್ ಆಗಿದ್ದರು. ಕೆಲಸದ ನಿಮಿತ್ತ ಕನಕಪುರಕ್ಕೆ ಹೋಗಿದ್ದ ಅವರು, ರಾತ್ರಿ ಹತ್ತು ಗಂಟೆ ಸುಮಾರಿಗೆ ಬೈಕ್ನಲ್ಲಿ ಮನೆಗೆ ಹಿಂದಿರುಗುವಾಗ ಈ ದುರ್ಘಟನೆ ನಡೆದಿದೆ. ಲಾರಿಗೆ ಬೈಕ್ ಗುದ್ದಿಸಿ ಕೆಳಗೆ ಬಿದ್ದ ಅವರ ತಲೆಗೆ ತೀವ್ರ ಪೆಟ್ಟಾಗಿದ್ದು, ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದರು. ಲಾರಿ ಚಾಲಕ ವಾಹನದೊಂದಿಗೆ ಪರಾರಿಯಾಗಿದ್ದಾನೆ ಎಂದು ಕೆಂಗೇರಿ ಸಂಚಾರ ಠಾಣೆ ಪೊಲೀಸರು ಹೇಳಿದ್ದಾರೆ. ಪ್ರಕರಣ ದಾಖಲಾಗಿದೆ.
ಸುರೇಶ್, ಎರಡು ವರ್ಷದ ಹಿಂದೆ ರೇವತಿ ಎಂಬುವರನ್ನು ವಿವಾಹವಾಗಿದ್ದರು. ದಂಪತಿಗೆ ಮಿಥುನ್ ಎಂಬ ಒಂದು ವರ್ಷದ ಗಂಡು ಮಗುವಿದೆ.