ಭಾಲ್ಕಿ: ಬುಧವಾರದಿಂದ ಮೂರು ದಿನಗಳವರೆಗೆ ಭಾಲ್ಕಿಯಲ್ಲಿ ನಡೆಯಲಿರುವ ಶತಾಯುಶಿ ಲಿಂ.ಡಾ. ಚನ್ನಬಸವ ಪಟ್ಟದ್ದೇವರ 12ನೇ ಸ್ಮರಣೋತ್ಸವ ಹಾಗೂ ಕಲ್ಯಾಣ ನಾಡಿನ 24ನೇ ಶರಣ ಸಮ್ಮೇಳನದ ಪ್ರಾಚಾರಾರ್ಥವಾಗಿ ಮಂಗಳವಾರ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು.ನೂರಾರು ಯುವಕರು ಷಟಸ್ಥಲ ಧ್ವಜಗಳನ್ನು ಹಿಡಿದುಕೊಂಡು ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು. ಇದಕ್ಕೂ ಮುನ್ನ ಹಿರೇಮಠದಲ್ಲಿ ಸ್ವಾಗತ ಸಮಿತಿಯ ಅಧ್ಯಕ್ಷರೂ ಆದ ಮಾಜಿ ಶಾಸಕ ಪ್ರಕಾಶ ಖಂಡ್ರೆ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದರು. ಮೂರು ದಿನಗಳ ಸಮ್ಮೇಳನದ ಯಶಸ್ಸಿಗೆ ಎಲ್ಲರೂ ಕೂಡಿ ಸೇವೆ ಸಲ್ಲಿಸಬೇಕು ಎಂದು ಹೇಳಿದರು.
ನಂತರ ಯುವಕರ ಜತೆಗೆ ಪ್ರಕಾಶ ಖಂಡ್ರೆ, ತಾಪಂ ಅಧ್ಯಕ್ಷ ಅಂಬಣ್ಣ, ಜಿಪಂ ಮಾಜಿ ಸದಸ್ಯ ಡಿ.ಕೆ. ಸಿದ್ರಾಮ, ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಪ್ರಧಾನ ಸಂಚಾಲಕ ಕಿರಣಕುಮಾರ ಖಂಡ್ರೆ ಮುಂತಾದವರು ಬೈಕ್ ಹತ್ತಿದರು. ಚೌಡಿ, ತೀನ್ ದುಕಾನ್ಗಲ್ಲಿ, ಪುರಸಭೆ, ಬೊಮ್ಮಗೊಂಡೇಶ್ವರ ವೃತ್ತ, ಮಹಾತ್ಮಾ ಜ್ಯೋತಿಭಾ ಫುಲೆ ಚೌಕ್, ಡಾ. ಅಂಬೇಡ್ಕರ್, ಗಾಂಧಿ, ಬಸವೇಶ್ವರ ವೃತ್ತಗಳ ಮೂಲಕ ಚನ್ನಬಸವಾಶ್ರಮ ತಲುಪಿತು. ಯುವಕರ ಜಯಘೋಷಗಳು ಮುಗಿಲು ಮುಟ್ಟಿದವು. ಕರವೇ ವಿಭಾಗೀಯ ಅಧ್ಯಕ್ಷ ಶಶಿಧರ ಕೋಸಂಬೆ, ಮಾಳಸ್ಕಾಂತ ವಗ್ಗೆ, ಶ್ರೀಕಾಂತ ಭೊರಾಳೆ, ಗುರುಬಸವ ಮೂಲಗೆ, ಪುರಸಭೆ ಉಪಾಧ್ಯಕ್ಷ ಚಂದ್ರಕಾಂತ ಪಾಟೀಲ, ಗ್ರಾಪಂ ಅಧ್ಯಕ್ಷ ಸಿದ್ರಾಮೇಶ್ವರ ಪಾಟೀಲ, ಓಂಪ್ರಕಾಶ ರೊಟ್ಟೆ, ರಮೇಶ ಪಟ್ನೆ ಮುಂತಾದವರು ಇದ್ದರು.