ನವದೆಹಲಿ (ಪಿಟಿಐ): ಲೋಕಪಾಲ ಮಸೂದೆಯ ಕರಡು ರಚನಾ ಸಮಿತಿಯಲ್ಲಿ ಐವರು ನಾಗರಿಕ ಸಮಾಜದ ಸದಸ್ಯರನ್ನು ಸೇರ್ಪಡೆ ಮಾಡಿದ್ದನ್ನು ವಕೀಲರ ತಂಡವೊಂದು ಸೋಮವಾರ ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಿದೆ.
ವಕೀಲ ಎಂ.ಎಲ್. ಶರ್ಮಾ ಮತ್ತು ಇತರರು ಐವರು ಸಚಿವರು ಇರುವ ಸಮಿತಿಯಲ್ಲಿ ಐದು ಮಂದಿ ನಾಗರಿಕ ಸಮಾಜದ ಸದಸ್ಯರನ್ನು ಸೇರ್ಪಡೆ ಮಾಡಿದ್ದನ್ನು ಪ್ರಶ್ನಿಸಿ ಕೋರ್ಟ್ ಹೊಸಿಲು ತುಳಿದಿದ್ದಾರೆ.
ಸಂಸದೀಯ ಸಮಿತಿಯಲ್ಲಿ ಸಂಸತ್ತಿನ ಸದಸ್ಯರು ಮಾತ್ರವೇ ಇರಬೇಕು. ಬೇರೆ ಯಾರೂ ಇರುವಂತಿಲ್ಲ ಎಂಬ ಸಂವಿಧಾನ ಬದ್ಧ ನಿಯಮವನ್ನೇ ಈ ಸಮಿತಿ ಮೂಲೆಪಾಲು ಮಾಡಿದೆ ಎಂದು ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ದೂರಿದ್ದಾರೆ. ಕ್ರಮವಾಗಿ ಅಪ್ಪ ಮತ್ತು ಮಗನಾದ ಶಾಂತಿಭೂಷಣ್ ಮತ್ತು ಪ್ರಶಾಂತ ಭೂಷಣ್ ಅವರನ್ನು ಸಮಿತಿಗೆ ಸೇರ್ಪಡೆ ಮಾಡಿದ್ದರ ಮೇಲೂ ವಕೀಲರ ತಂಡ ಹರಿಹಾಯ್ದಿದೆ.