ಚಿತ್ರದುರ್ಗ: ಹಿರಿಯೂರು ತಾಲ್ಲೂಕು ಮಸ್ಕಲ್ ಗ್ರಾಮದ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಗಂಗಾಧರ ನಾಯ್ಕ ಗುರುವಾರ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ.ಹಿರಿಯೂರು ಪಟ್ಟಣದ ಪ್ರವಾಸಿ ಮಂದಿರ ವೃತ್ತದ ಹತ್ತಿರ ರೂ 4 ಸಾವಿರ ಲಂಚ ತೆಗೆದುಕೊಳ್ಳುತ್ತಿದ್ದಾಗ ದಾಳಿ ನಡೆಸಲಾಯಿತು ಎಂದು ಜಿಲ್ಲಾ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಎ.ಎಂ. ನದಾಫ್ ತಿಳಿಸಿದ್ದಾರೆ.
ಮಸ್ಕಲ್ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಭೀಮನಬಂಡೆ ಗ್ರಾಮದ ಬಿ. ಶಿವಮೂರ್ತಿ ಅವರು ತಮ್ಮ ಜಮೀನಿನಲ್ಲಿ ನೀರಾವರಿ ಸೌಲಭ್ಯಕ್ಕಾಗಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿ ನೀರಿನ ತೊಟ್ಟಿಯನ್ನು ನಿರ್ಮಿಸಿದ್ದರು.
ತೊಟ್ಟಿಯ ಸಾಮಗ್ರಿಗಳಿಗಾಗಿ ರೂ 14,083 ಬಿಲ್ ಅನ್ನು ಗ್ರಾಮ ಪಂಚಾಯ್ತಿಯಿಂದ ನೀಡಬೇಕಾಗಿತ್ತು. ಈ ಹಣ ನೀಡಲು ರೂ 4 ಸಾವಿರ ಲಂಚ ಕೇಳ್ದ್ದಿದರು. ಈ ಬಗ್ಗೆ ಲೋಕಾಯುಕ್ತ ಠಾಣೆಯಲ್ಲಿ ದೂರು ಸಲ್ಲಿಸಲಾಗಿತ್ತು.