ಸಿಂಧನೂರು: ಲಂಚ ಸ್ವೀಕರಿಸುತ್ತಿದ್ದ ನಗರದ ಜೆಸ್ಕಾಂ ಎಕ್ಸಿಕ್ಯೂಟಿವ್ ಎಂಜಿನಿಯರ್ ಕಾರ್ಯಾಲಯದ ಲೆಕ್ಕಾಧಿಕಾರಿ ರೂಪಲಾ ನಾಯ್ಕ ಅವರು ಮಂಗಳವಾರ ಲೋಕಾಯುಕ್ತ ಬಲೆಗೆ ಬಿದ್ದರು. ರಾಯಚೂರು ಲೋಕಾಯುಕ್ತ ಪ್ರಭಾರ ಎಸ್.ಪಿ. ಎಸ್.ಬಿ.ಪಾಟೀಲ್ ಅವರ ನೇತೃತ್ವದ ತಂಡ ಈ ದಾಳಿ ನಡೆಸಿತು.
ಜೆಸ್ಕಾಂ ಕಾರ್ಯಾಲಯದ ಜೂನಿಯರ್ ಎಂಜಿನಿಯರ್ ಮಹೆಬೂಬ ಎನ್ನುವವರ ರಜೆ ನಗದೀಕರಣಕ್ಕೆ ಸಂಬಂಧಿಸಿದ 1,44,564 ರೂಪಾಯಿ ಬಿಲ್ ಮಾಡಬೇಕಾದರೆ 5 ಸಾವಿರ ಲಂಚ ಕೊಡುವಂತೆ ರೂಪಲಾ ನಾಯ್ಕ ಒತ್ತಾಯಿಸಿದ್ದರು. ಲಂಚ ಕೊಡದ ಕಾರಣಕ್ಕಾಗಿ ಒಂದುವರೆ ತಿಂಗಳಿನಿಂದ ಬಿಲ್ ಮಾಡದೇ ತಡೆ ಹಿಡಿದಿದ್ದರು. ಅನಿವಾರ್ಯವಾಗಿ ರೂ. 5 ಸಾವಿರ ಲಂಚ ಕೊಡಲು ಒಪ್ಪಿ ಮಂಗಳವಾರ 3 ಸಾವಿರ ಲಂಚದ ಹಣ ಕೊಡುವ ಸಮಯದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದರು.
ಎಕ್ಸಿಕ್ಯೂಟಿವ್ ಎಂಜಿನಿಯರ್ ಪಟ್ಟಣಶೆಟ್ಟಿ ಅನುಪಸ್ಥಿತಿಯಲ್ಲಿ ಹಾಜರಿದ್ದ ಪ್ರಭಾರ ಎಕ್ಸಿಕ್ಯೂಟಿವ್ ಎಂಜಿನಿಯರ್ ಅವರಿಗೆ ನೆನೆಗುದಿಗೆ ಬಿದ್ದಿರುವ ಬಿಲ್ ಹಣವನ್ನು ಜೂನಿಯರ್ ಎಂಜಿನಿಯರ್ ಮಹೆಬೂಬ ಅವರಿಗೆ ಪಾವತಿಸಬೇಕು. ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಬೇಕೆಂದು ಎಸ್.ಬಿ.ಪಾಟೀಲ ತಿಳಿಸಿದರು.
ಸರ್ಕಲ್ ಇನ್ಸ್ಪೆಕ್ಟರ್ ನಿಂಗಪ್ಪ, ಸಿಬ್ಬಂದಿ ಅಜಮ್ಸಾಬ, ಶಂಕ್ರಯ್ಯ, ಶಿವಕುಮಾರ ತಿಮ್ಮಪ್ಪ, ಕುಮಾರಯ್ಯ, ವೆಂಕಪ್ಪ ದಾಳಿಯಲ್ಲಿ ಭಾಗವಹಿಸಿದ್ದರು.