ಚಾಮರಾಜನಗರ: ಕರಿಕಲ್ಲು ಗಣಿ ಗುತ್ತಿಗೆಯ ಪರವಾನಗಿ ನವೀಕರಣಕ್ಕೆ ಎರಡು ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ಚಾಮರಾಜನಗರ ತಾಲ್ಲೂಕಿನ ತಹಶೀಲ್ದಾರ್ ಲೋಕಾಯುಕ್ತ ಪೊಲೀಸರ ಬಲೆಗೆ ಬುಧವಾರ ಬಿದ್ದಿದ್ದಾರೆ. ತಹಶೀಲ್ದಾರ್ ಚಂದ್ರಕಾಂತ್ ಭಜಂತ್ರಿ ಹಾಗೂ ಮಧ್ಯವರ್ತಿ ನಾಗೇಂದ್ರ ಅವರನ್ನು ಬಂಧಿಸಲಾಗಿದೆ.
ತಾಲ್ಲೂಕಿನ ಹರವೆ ಗ್ರಾಮದಲ್ಲಿ ಸಿರಾಜ್ ಅಹಮದ್ ಎಂಬುವವರು ಕರಿಕಲ್ಲು ಗಣಿಗಾರಿಕೆ ನಡೆಸುತ್ತಿದ್ದರು. ಅವರ ಗಣಿ ಗುತ್ತಿಗೆ ಅವಧಿ ಮುಗಿದಿತ್ತು. ಪರವಾನಗಿ ನವೀಕರಣಕ್ಕಾಗಿ ತಾಲ್ಲೂಕು ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಈ ವೇಳೆ ತಹಶೀಲ್ದಾರ್ ಚಂದ್ರಕಾಂತ್ ಭಜಂತ್ರಿ ಅವರು 5 ಲಕ್ಷ ರೂಪಾಯಿ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು.
ಪ್ರವಾಸಿ ಮಂದಿರದಲ್ಲಿ ಮಧ್ಯವರ್ತಿ ನಾಗೇಂದ್ರ ಅವರು ಎರಡು ಲಕ್ಷ ಲಂಚದ ಹಣವನ್ನು ಚಂದ್ರಕಾಂತ್ ಭಜಂತ್ರಿಗೆ ನೀಡುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಬಂಧಿಸಿದ್ದಾರೆ.
ಈ ಮೊದಲೇ ತಹಶೀಲ್ದಾರ್ಗೆ ರೂ 50 ಸಾವಿರ ಸಂದಾಯವಾಗಿತ್ತು ಎನ್ನಲಾಗಿದೆ. ಲೋಕಾಯುಕ್ತ ಪೊಲೀಸ್ ನಿರೀಕ್ಷಕ ನಟರಾಜ್ ನೇತೃತ್ವದ ತಂಡ ತಹಶೀಲ್ದಾರ್ ಮತ್ತು ಮಧ್ಯವರ್ತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.