ನವದೆಹಲಿ (ಪಿಟಿಐ): ಕಾಮನ್ವೆಲ್ತ್ ಕ್ರೀಡಾಕೂಟದ ಸಂಘಟನಾ ಸಮಿತಿ ಮುಖ್ಯಸ್ಥ ಸ್ಥಾನದಿಂದ ತಮ್ಮನ್ನು ವಜಾ ಮಾಡಿರುವ ಸರ್ಕಾರದ ಕ್ರಮವು ‘ಕಾನೂನು ಬಾಹಿರ’ವೆಂದು ಸುರೇಶ್ ಕಲ್ಮಾಡಿ ಕಿಡಿಕಾರಿದ್ದಾರೆ.
ಕೇಂದ್ರ ಕ್ರೀಡಾ ಸಚಿವ ಅಜಯ್ ಮಾಕೇನ್ ಅವರು ಕಲ್ಮಾಡಿ ಹಾಗೂ ಅವರ ನಿಕಟವರ್ತಿಯಾದ ಕಾಮನ್ವೆಲ್ತ್ ಕ್ರೀಡಾಕೂಟದ ಸಂಘಟನಾ ಸಮಿತಿ ಮಹಾ ಕಾರ್ಯದರ್ಶಿ ಲಲಿತ್ ಭಾನೋಟ್ ಅವರನ್ನು ವಜಾ ಮಾಡಿದ ಮರುದಿವವೇ ಕಲ್ಮಾಡಿ ಆಕ್ಷೇಪದ ಧ್ವನಿ ಎತ್ತಿದ್ದಾರೆ.
ತಮ್ಮನ್ನು ಸಂಘಟನಾ ಸಮಿತಿ ಮುಖ್ಯಸ್ಥ ಸ್ಥಾನಕ್ಕೆ ನೇಮಕ ಮಾಡಿದ ಭಾರತ ಒಲಿಂಪಿಕ್ ಸಮಿತಿ (ಐಒಎ) ಮಾತ್ರ ವಜಾ ಮಾಡುವ ಅಧಿಕಾರ ಹೊಂದಿದೆ. ಸರ್ಕಾರ ಈ ವಿಷಯದಲ್ಲಿ ತೀರ್ಮಾನ ಕೈಗೊಂಡಿರುವುದು ಕಾನೂನು ಬಾಹಿರವೆಂದು ಅವರು ಮಂಗಳವಾರ ತಿಳಿಸಿದರು.
‘ವಜಾ ಮಾಡಿರುವುದಾಗಿ ತಿಳಿಸಿದ ಪತ್ರವನ್ನು ನೋಡಿ ನನಗೆ ಆಘಾತವಾಯಿತೆಂದು ಕ್ರೀಡಾ ಸಚಿವರಿಗೆ ಪತ್ರ ಬರೆದು ತಿಳಿಸಿದ್ದೇನೆ’ ಎಂದು ಹೇಳಿದ ಅವರು ‘ನನ್ನ ವಿರುದ್ಧದ ಯಾವುದೇ ನ್ಯಾಯಾಂಗ ಪ್ರಕ್ರಿಯೆ ಪೂರ್ಣಗೊಳ್ಳುವ ಮೊದಲೇ ಇಂಥದೊಂದು ತೀರ್ಮಾನ ಕೈಗೊಳ್ಳುವ ಹಕ್ಕು ಸರ್ಕಾರಕ್ಕೆ ಇಲ್ಲ. ಹಾಗೆ ಮಾಡುವುದು ಸಾಧ್ಯವಿರುವುದು ಐಒಎಗೆ ಮಾತ್ರ’ ಎಂದು ಅವರು ಸ್ಪಷ್ಟಪಡಿಸಿದರು.
ಆರೋಪ ಹೊತ್ತಿರುವವರು ಅದೇ ಹುದ್ದೆಯಲ್ಲಿ ಇರುವುದರಿಂದ ತನಿಖೆಗೆ ಅಡ್ಡಿಯಾಗುತ್ತದೆ ಎನ್ನುವ ಕಾರಣವನ್ನು ಸರ್ಕಾರ ನೀಡಿದ್ದನ್ನು ಟೀಕಿಸಿದರು. ‘ಯಾವುದೇ ಸ್ವರೂಪದ ತನಿಖೆಗೆ ಸಂಪೂರ್ಣವಾಗಿ ಸಹಕಾರ ನೀಡುತ್ತೇನೆ ಎನ್ನುವ ಭರವಸೆಯನ್ನು ಬಹಳ ಹಿಂದೆಯೇ ನೀಡಿದ್ದೇನೆ. ಆದರೂ ಇಂಥದೊಂದು ಕ್ರಮ ಕೈಗೊಂಡಿರುವುದು ನೋವುಂಟು ಮಾಡಿದೆ’ ಎಂದರು.